ಧಾರವಾಡ : ಜನವರಿ 12 ರಿಂದ 16 ರ ವರೆಗೆ 26 ನೇ ರಾಷ್ಟ್ರೀಯ ಯುವಜನೋತ್ಸವ ವಿದ್ಯಾಕಾಶಿ ಧಾರವಾಡದಲ್ಲಿ ನಡೆಯಲಿದೆ. ದೇಶದ ಸುಮಾರು 8 ಕೇಂದ್ರಾಡಳಿತ ಪ್ರದೇಶ ಹಾಗೂ 28 ರಾಜ್ಯಗಳಿಂದ ಯುವ ಪ್ರತಿಭೆಗಳು, ಪ್ರತಿಭಾವಂತ ಕಲಾವಿದರು ಮತ್ತು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಹಿರಿಯ ಕಲಾವಿದರು ಭಾಗವಹಿಸುತ್ತಿದ್ದಾರೆ.
ಕರ್ನಾಟಕದ ಭವ್ಯ ಪರಂಪರೆ ಹಾಗೂ ಉತ್ತರ ಕರ್ನಾಟಕದ ವಿಶೇಷತೆಗಳನ್ನು ಪರಿಚಯಿಸುವ ದೃಷ್ಟಿಯಿಂದ ಧಾರವಾಡ ಜಿಲ್ಲಾಡಳಿತವು ಅತಿಥಿಗಳನ್ನು ಸ್ವಾಗತಿಸಲು ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾರ್ಗದರ್ಶನದಲ್ಲಿ ಹುಡಾ ಆಯುಕ್ತ ಡಾ.ಸಂತೋಷ್ ಕುಮಾರ್ ಬಿರಾದಾರ್ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹುಡಾ ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿ ಸ್ವಾಗತ ಸಮಿತಿಯು ಕಳೆದ ಒಂದು ವಾರದಿಂದ ಶ್ರಮಿಸುತ್ತಿದೆ. ಕ್ಷೇತ್ರ ಉಮೇಶ ಬೊಮ್ಮಕ್ಕನವರ ಹಾಗೂ ಗಿರೀಶ್ ಪದಕಿ ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವ ಸುಮಾರು 7,500 ಸ್ಪರ್ಧಾಳು ಮತ್ತು ಅತಿಥಿಗಳಿಗೆ ವಿಶೇಷವಾದ ನೋಂದಣಿ ಕಿಟ್ಗಳನ್ನು ರೂಪಿಸಲಾಗಿದೆ. ಹಸಿರು ಯುವಜನೋತ್ಸವವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ನೋಂದಣಿ ಕಿಟ್ದಲ್ಲಿನ ವಸ್ತುಗಳು ಮರುಬಳಕೆಯ ವಸ್ತುಗಳಾಗಿವೆ.
ನೋಂದಣಿ ಕಿಟ್ದಲ್ಲಿ ಐಡಿ ಕಾರ್ಡ್, ಮರುಬಳಕೆಯ ಸ್ಟೀಲ್ ವಾಟರ್ ಬಾಟಲ್, ಉತ್ತಮ ಗುಣಮಟ್ಟದ ಬ್ಯಾಗ್, ಸುಮಾರು 8 ಕ್ಕೂ ಹೆಚ್ಚು ದಿನಬಳಕೆಯ ವಸ್ತುಗಳಿರುವ ಸಣ್ಣ ಕಿಟ್, ಯೋಗಾ ಮ್ಯಾಟ್, ಟ್ರ್ಯಾಕ್ ಸೂಟ್, ಯುವಜನೋತ್ಸವ ಮಾಹಿತಿ ಇರುವ ಇವೆಂಟ್ ಮೆನ್ಯೂ, ಕರ್ನಾಟಕ ಹಾಗೂ ಧಾರವಾಡ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಪುಸ್ತಕ ಹಾಗೂ ಅರವಿಂದೊ ಟ್ರಸ್ಟ್ ನೀಡಿರುವ ಯೂಥ್ ಆಫ್ ಇಂಡಿಯಾ ಪುಸ್ತಕ ಹಾಗೂ ಮುಖ್ಯವಾಗಿ ಧಾರವಾಡ ನೆನಪಿಸುವ, ಗುರುತಿಸುವ ಧಾರವಾಡ ಪೇಡಾ ಬಾಕ್ಸ್ ಹಾಗೂ ಖಾದಿ ಧ್ವಜದ ನೆನಪಿನ ಕಾಣಿಕೆ ಇರುತ್ತದೆ.

ಸಾರಿಗೆ, ವಸತಿ, ನೋಂದಣಿ ಸ್ಥಳ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ನೀಡಿ, ತಕ್ಷಣಕ್ಕೆ ಸಹಾಯ ಮಾಡಲು ಅನುಕೂಲವಾಗುವಂತೆ ಸ್ವಾಗತ ಸಮಿತಿಯು ಸಹಾಯ ಕೇಂದ್ರಗಳನ್ನು ತೆರೆದಿದೆ. ಮುಖ್ಯವಾಗಿ ಧಾರವಾಡ ಮತ್ತು ಹುಬ್ಬಳ್ಳಿ ರೈಲ್ವೆ, ಬಸ್ ಹಾಗೂ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಹಾಯ ಕೇಂದ್ರಗಳನ್ನು ತೆಗೆಯಲಾಗಿದೆ.
ಸಹಾಯ ಕೇಂದ್ರಕ್ಕೆ ಆಗಮಿಸುವ ಅತಿಥಿಗಳನ್ನು ನಿಲ್ದಾಣದಿಂದಲೇ ಸ್ವಾಗತಿಸಲು ಕಲಾ ತಂಡಗಳನ್ನು ಸಹ ನೇಮಿಸಲಾಗಿದೆ. ಸಹಾಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಯನ್ನು ನೇಮಿಸಲಾಗಿದ್ದು, ದಿನದ 24 ಗಂಟೆಯೂ ಸಹಾಯ ಕೇಂದ್ರದಲ್ಲಿದ್ದು, ಬರುವ ಅತಿಥಿಗಳಿಗೆ ಅವರು ಸಹಾಯ ನೀಡಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

