ಹುಬ್ಬಳ್ಳಿ: ರಾಷ್ಟ್ರೀಯ ಯುವಜನೋತ್ಸವಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಮೋದಿ ಕಾರ್ಯಕ್ರಮಕ್ಕೆ ದೊಡ್ಡ ಪ್ರಮಾಣದಲ್ಲಿ ನೋಂದಣಿಯಾಗಿದೆ. ಯಾರೇ ಬಂದರೂ ಒಳಗೆ ಬಿಡುವುದಕ್ಕೆ ಹೇಳಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಸಿದ್ಧತೆ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಜಿಮ್ ಖಾನಾ ಕ್ಲಬ್ ನಲ್ಲಿ ಎಲ್.ಇ.ಡಿ ವ್ಯವಸ್ಥೆ ಮಾಡಲಾಗಿದೆ. ನ ಭೂತೋ ನ ಭವಿಷ್ಯತಿ ಅನ್ನೋ ರೀತಿಯಲ್ಲಿ ವ್ಯವಸ್ಥೆಯಾಗಿದೆ. ಲಕ್ಷಾಂತರ ಜನ ಬರುತ್ತಿದ್ದಾರೆ. ಪ್ರಧಾನಿಗಳು ಬರುತ್ತಿರುವುದು ಜನತೆಯ ಸಂತೋಷಕ್ಕೆ ಕಾರಣವಾಗಿದೆ ಎಂದರು.
ರೋಡ್ ಶೋ ಮಾಡುತ್ತಿಲ್ಲ, ದಾರಿಯಲ್ಲಿ ಮೋದಿ ಜನರನ್ನ ಭೇಟಿಯಾಗ್ತಾರೆ. ಪ್ರತಿ ಕಿಲೋ ಮೀಟರ್ ಗೆ ಒಂದು ಕಡೆ ಮೋದಿ ಜನರನ್ನು ಭೇಟಿಯಾಗ್ತಾರೆ. ಒಟ್ಟು ಎಂಟು ಕಡೆ ಜನರನ್ನು ಮೋದಿ ಭೇಟಿ ಆಗುತ್ತಾರೆ ಎಂದು ಅವರು ಹೇಳಿದರು.
ಶೆಟ್ಟರ್ ಹೆಸರು ಕಡೆಗಣನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಅಖಿಲ ಭಾರತ ಮಟ್ಟದ ಕಾರ್ಯಕ್ರಮ. ಎಲ್ಲ ಮಂತ್ರಿಗಳ ಹೆಸರು ಹಾಕಲಾಗಿತ್ತು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೆಸರು ಕೈಬಿಡಲಾಗಿತ್ತು. ಗಮನಕ್ಕೆ ಬಂದ ಕೂಡಲೇ ಅದನ್ನ ಸರಿ ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಉದ್ದೇಶಪೂರ್ವಕವಾಗಿ ಬಿಡಲಾಗಿಲ್ಲ. ಶೆಟ್ಟರ್ ಜೊತೆ ಬೇರೆ ಶಾಸಕರಿಗೂ ವೇದಿಕೆಯಲ್ಲಿ ಅವಕಾಶ ಇರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.