ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಾಂಸ್ಕೃತಿಕ ಮಹೋತ್ಸವ ಹಾಗೂ ಕ್ಷಮತಾ ಸೇವಾ ಸಂಸ್ಥೆ ಸಹಯೋಗದಲ್ಲಿ ಜ. ೨೧,೨೨ ಎರಡು ದಿನಗಳ ಕಾಲ ಅಂತರಾಷ್ಟ್ರೀಯ ಗಾಳಿಪಟ ಹಾಗೂ ಸಾಂಸ್ಕೃತಿಕ ಉತ್ಸವ ಜೆ.ಕೆ. ಶಾಲೆ ಮಾರ್ಗ ವೆಂಕಟರಮಣ ದೇವಸ್ಥಾನ ಎದುರಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕ್ಷಮತಾ ಸೇವಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷದಿಂದ ಗಾಳಿಪಟ ಉತ್ಸವ ಮಾಡಲಾಗುತ್ತಿದೆ. ಇದರ ಜೊತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಹ ಏರ್ಪಡಿಸಲಾಗಿದೆ. ಗಾಳಿಪಟದ ಉತ್ಸವದಲ್ಲಿ ಲಂಡನ್, ಇಂಗ್ಲೆಂಡ್, ಅಮೇರಿಕಾ, ಪ್ರಾನ್ಸ್ ಸೇರಿ ಒಟ್ಟು ೧೫ ದೇಶದ ೨೫ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದರು.
ಎಲ್ಲ ವಯಸ್ಸಿನವರು ಕುಟುಂಬ ಸಮೇತ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ದೇಶಿಯ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ಸವ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಜ. ೨೧ ರಂದು ಬೆಳಿಗ್ಗೆ ೧೦.೩೦ ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಅತಿಥಿಗಳಾಗಿ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ,ಅಮೃತ ದೇಸಾಯಿ ಭಾಗವಹಿಸುವರು ಎಂದರು.
ಬೆಳಿಗ್ಗೆ ೧೧ ಗಂಟೆಗೆ ೯ರಿಂದ ೧೨ ತರಗತಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿಯವರ ಬರೆದಿರುವ ಎಕ್ಸಾಮ ವಾರಿಯಸ್೯ ವಿಷಯದ ಕುರಿತು ಪರೀಕ್ಷಾ ಪೇ ಚರ್ಚೆ ಗೆ ಸಚಿವ ಮುನಿರತ್ನ ಚಾಲನೆ ನೀಡುವರು. ಸಭಾಪತಿ ಬಸವರಾಜ ಹೊರಟ್ಟಿ ಅವರು ಬಹುಮಾನ ವಿತರಿಸುವರು ಎಂದು ತಿಳಿಸಿದರು.
ಜ. ೨೨ ರಂದು ೧೨.೩೦ ಕ್ಕೆ ದೇಸಿ ಕ್ರೀಡೆಗಳಿಗೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡುವರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಚಿವ ಸಿ.ಸಿ. ಪಾಟೀಲ ಹಾಗೂ ಪಿ.ರಾಜೀವ ಭಾಗವಹಿಸುವರು.
ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ, ಮಲ್ಲಿಕಾರ್ಜುನಗೌಡ ಪಾಟೀಲ್, ಮುರಳೀಧರ ಮಳಗಿ, ಚಂದ್ರಶೇಖರ ಬೆಳವಾಡಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

