ಅವಳಿನಗರದ ಕಾಮಗಾರಿಗಳಿಗೆ ಖುದ್ದು ಭೇಟಿ, ಪರಿಶೀಲನೆ; ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ: ಜ.26 ರಿಂದ ಡಿಜಿಟಲ್ ಪೇರ್ ಮೀಟರ್ ಅಳವಡಿಕೆ ಪರಶೀಲನಾ ಅಭಿಯಾನ, ತಪ್ಪಿದವರಿಗೆ ರೂ. 5 ಸಾವಿರ ದಂಡ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಧಾರವಾಡ : ಅವಳಿನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚುತ್ತಿದೆ.ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಮಹಾನಗರಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಡಿ ಗುರುತಿಸಿ, ಕೈಗೊಂಡಿರುವ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಸದ್ಯದಲ್ಲಿಯೇ ಸಂಭಂದಿಸಿದ ಅಧಿಕಾರಿ ಮತ್ತು ಇಂಜನಿಯರ್ ಗಳೊಂದಿಗೆ ತಾವೇ ಕಾಮಗಾರಿಗಳ ಸ್ಥಳಗಳಿಗೆ ಖುದ್ದು ಭೇಟಿ ನೀಡಿ, ಪರಿಶೀಲನೆ ಮಾಡಲಾಗುವುದು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಮತ್ತು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಗೆ ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಸ್ಮಾರ್ಟ್ ಸಿಟಿ, ಮಹಾನಗರಪಾಲಿಕೆ ಸೇರಿದಂತೆ ಸಂಭಂದಿಸಿದ ಇಂಜನಿಯರಗಳು, ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಸಭಾ ಸೂಚನಾಪತ್ರ ನೀಡಿದರೂ ಸಭೆಗೆ ಬಾರದೆ, ಉದಾಶೀನತೆ ತೋರಿದರೆ ಸೂಕ್ತ ಕ್ರಮ ಜರುಗಿಸಲಾಗುವುದು. ಸಭೆಯಲ್ಲಿ ನೀಡಿದ ಕಾಮಗಾರಿಗಳ ಗುರಿ ಸಾಧಿಸಿ, ಆಯಾ ಇಲಾಖೆ ಅಧಿಕಾರಿಗಳು ಸಮಿತಿ ಸದಸ್ಯ ಕಾರ್ಯದರ್ಶಿಗೆ ತಪ್ಪದೇ ವರದಿ ನೀಡಬೇಕು. ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆ ವರದಿ ಪರಿಶೀಲಿಸಿ ಪ್ರಗತಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಪಿಡಬ್ಲ್ಯೂಡಿ ಅಧಿಕಾರಿಗಳು ಛಾಯಾಚಿತ್ರಗಳೊಂದಿಗೆ ಪಿಪಿಟಿ ಮೂಲಕ ತ್ರೈಮಾಸಿಕ ಪ್ರಗತಿಯನ್ನು ಮಂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಇಂದು ಜರುಗಿದ ಜಿಲ್ಲಾ ಸುರಕ್ಷತಾ ಸಭೆಗೆ ಪೂರ್ಣ ಮಾಹಿತಿ ಸಲ್ಲಿಸದಿರುವದರಿಂದ ಇದನ್ನು, ಬರುವ ಪೆಬ್ರವರಿ 1, ರಂದು ಮರು ಸಭೆ ಆಯೋಜಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಅವಳಿನಗರದಲ್ಲಿ ಪ್ರೀಪೇಡ್ ಆಟೋ ವ್ಯವಸ್ಥೆಯನ್ನು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಹೆಚ್ಚು ಪ್ರಚಾರಗೊಳಿಸಬೇಕು. ಆಟೋ ಸಂಘದವರಿಂದ ಪ್ರೀಪೇಡ್ ಸೌಲಭ್ಯ ಕುರಿತು ಪ್ರಾಯಾಣಿಕರಿಗೆ ಸರಿಯಾದ ಮಾಹಿತಿ ನೀಡುವ ಕೆಲಸವಾಗಬೇಕು. ಪೊಲೀಸ್ ಇಲಾಖೆ ಮತ್ತು ಮಹಾನಗರಪಾಲಿಕೆ ಸಹಕಾರ ನೀಡಲಿದೆ. ಪ್ರಯಾಣಿಕರಿಗೆ ಅನಕೂಲವಾಗುವಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಆಟೋಗಳಿಗೆ ಡಿಜಿಟಲ್ ಪೇರ್ ಮೀಟರ್ ಅಳವಡಿಸಬೇಕು. ಈಗಾಗಲೇ 1,451 ಆಟೋಗಳಿಗೆ ಡಿಜಿಟಲ್ ಪೇರ್ ಮೀಟರ್ ಅಳವಡಿಸಲಾಗಿದೆ. ಎಲ್ಲ ಆಟೋಗಳಿಗೂ ಡಿಜಿಟಲ್ ಪೇರ್ ಮೀಟರ್ ಅಳವಡಿಕೊಂಡು ಆಪರೇಟ್ ಮಾಡಲು ಸಾಕಷ್ಟು ಸಮಯಾವಕಾಶ ನೀಡಿ, ತಿಳಿಸಲಾಗಿದೆ. ಡಿಜಿಟಲ್ ಮೀಟರ ಇದ್ದರೂ ಕೆಲವು ಆಟೋದವರು ಆಪರೇಟ್ ಮಾಡುತ್ತಿಲ್ಲ. ಇದನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಗಂಭೀರವಾಗಿ ಪರಿಗಣಿಸಿದ್ದು, ಬರುವ ಜನವರಿ 26 ರಿಂದ ಡಿಜಿಟಲ್ ಪೇರ್ ಮೀಟರ್ ಅಳವಡಿಕೆ ಪರಿಶೀಲನೆ ಅಭಿಯಾನವನ್ನು ಅವಳಿನಗರದಲ್ಲಿ ಆರಂಭಿಸಲಾಗುವುದು. ಡಿಜಿಟಲ್ ಪೇರ್ ಮೀಟರ ಅಳವಡಿಸದವರಿಗೆ ರೂ.5000 ದಂಡ ವಿಧಿಸಿ, ಮೋಟಾರು ವಾಹನ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಬಸ್ಸ್ ಗಳಲ್ಲಿ ಚಿವಿಂಗ್ಂ, ಪಾನ್ ಪರಾಗ್, ಗುಟ್ಕಾ, ತಂಬಾಕು ಸೇವನೆ ಮಾಡದಂತೆ ನಿಯಮವಿದ್ದರೂ, ಸರಿಯಾಗಿ ಪಾಲನೆ ಆಗುತ್ತಿಲ್ಲ. ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ
ಸ್ವಚ್ಚತೆ ಕಾಪಾಡಲು ಕಸಸಂಗ್ರಹದ ಬುಟ್ಟಿ ಅಳವಡಿಸಬೇಕು ಮತ್ತು ಅಂತಹ ಅಪರಾಧ ಮಾಡುವವರ ವಿರುದ್ಧ ಸೂಕ್ರ ಕ್ರಮ ಜರುಗಿಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ವೇದಿಕೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ., ಉಪ ಪೊಲೀಸ್ ಆಯುಕ್ತ ಡಾ.ಗೋಪಾಲ ಬ್ಯಾಕೂಡ ಅವರು, ಸಂಬಂದಿಸಿದ ಅಧಿಕಾರಿಗಳಿಂದ ಹಿಂದಿನ ಸಭೆಯ ನಿರ್ಣಯ ಮತ್ತು ಅವುಗಳ ಅನುಪಾಲನ ಕ್ರಮಗಳ ಕುರಿತು ಸಭೆಯಲ್ಲಿ ಮಂಡಿಸಿದ ವರದಿಯನ್ನು ಪರಿಶೀಲಿಸಿದರು
ಪಶ್ಚಿಮ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಶಂಕ್ರಪ್ಪ ಸ್ವಾಗತಿಸಿದರು. ಪೂರ್ವವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ವಂದಿಸಿದರು. ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರರು ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಸಾರಿಗೆ ಇಲಾಖೆಯಿಂದ ರೂಪಿಸಿದ್ದ ವಿವಿಧ ರೀತಿಯ ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ವೇದಿಕೆಯಲ್ಲಿದ್ದ ಅಧಿಕಾರಿಗಳು ಬಿಡುಗಡೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತ ಕೆ. ಪ್ರಶಾಂತಕುಮಾರ, ಹುಡಾ ಆಯುಕ್ತ ಡಾ.ಸಂತೋಷ ಬಿರಾದಾರ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳರ, ಮಹಾನಗರಪಾಲಿಕೆ ಅಧೀಕ್ಷಕ ಅಭಿಯಂತರ ತಿಮ್ಮಪ್ಪ , ಎನ್.ಡಬ್ಲ್ಯೂ. ಕೆ.ಎಸ್.ಆರ್.ಟಿ.ಸಿ ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಚನ್ನಪ್ಪಗೌಡರ, ಕಾನೂನು ಮಾಪನ ಇಲಾಖೆಯ ಸಹಾಯಕ ನಿಯಂತ್ರಣಾಧಿಕಾರಿ ನರಸಣ್ಣವರ, ಸಾರಿಗೆ ಇಲಾಖೆಯ ದಿನಮಣಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ, ಹೆಸ್ಕಾಂ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.