ಹುಬ್ಬಳ್ಳಿ: ಕಳಸಾ-ಬಂಡೂರಿ, ಮಹದಾಯಿ ವಿಚಾರವಾಗಿ ರಾಜ್ಯ ಸರ್ಕಾರ ಕೂಡಲೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ರೈತ ಸೇನಾ ಕರ್ನಾಟಕ ಹಾಗೂ ಕಳಸಾ-ಬಂಡೂರಿ ಹೋರಾಟಗಾರ ವಿರೇಶ ಸೊಬರದಮಠ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಯೋಜನೆಗೆ ವಿಳಂಬ ಉಂಟು ಮಾಡುವ ಉದ್ದೇಶದಿಂದ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿದರು. ಆದರೆ ನ್ಯಾಯಾಲಯ ಅರ್ಜಿಯನ್ನು ತಿರಸ್ಕಾರ ಮಾಡುವ ಮೂಲಕ ಗೋವ ಮುಖಭಂಗ ಉಂಟುಮಾಡಿದೆ ಎಂದರು.
ಗೋವಾ ಸರ್ಕಾರಕ್ಕೆ ಸಂಪೂರ್ಣ ಕಾನೂನಿನ ಅರಿವಿಲ್ಲ ಅಲ್ಲದೇ ನೀರಿನ ಅಗತ್ಯವಿಲ್ಲ, ಆದರೆ ನಮಗೆ ಅಗತ್ಯವಿದ್ದರೂ ನೀರನ್ನು ಪಡೆಯಲು ಬಿಡುತ್ತಿಲ್ಲ ನ್ಯಾಯಧೀಕರಣದ ವಿರುದ್ಧ ಮೊಂಡುತನ ಮಾಡುತ್ತಿರುವುದು ಸರಿಯಲ್ಲ. ಇದು ಅವಿವೇಕತನವಾಗಿದೆ. ಪದೇ ಪದೇ ಗೋವಾ ಕಳಸಾ- ಬಂಡೂರಿ ಯೋಜನೆ ಕುರಿತು ಖ್ಯಾತೆ ತೆಗೆಯುವುದನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಗೆ ರಿಟ್ ಪಿಟಿಷನ್ ಹಾಗೂ ಪಿಐಎಲ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ರಾಜಕೀಯ ಪಕ್ಷಗಳು ಮಹದಾಯಿ ಹೋರಾಟವನ್ನು ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡಿವೆ. ಮಹದಾಯಿಗಾಗಿ ಒಂದು ಸಂಘಟನೆ ಒಂದು ಪಕ್ಷ ಹೋರಾಟ ಮಾಡಿಲ್ಲ. ಇದು ಜನಾಂದೋಲನ ಆಗಿದ್ದು 1013 ಸಂಘಟನೆಗಳು ಮಹದಾಯಿ ಹೋರಾಟ ಮಾಡಿವೆ. ಸಾವಿರಾರು ಕೋಟಿ ಅನುದಾನ ಬಂದಿದೆ. ಮುಖ್ಯಮಂತ್ರಿಗಳು ಎರಡು ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಅದನ್ನು ಉಳಿಸಿಕೊಳ್ಳಬೇಕು. ಮಾರ್ಚ್ 10 ರೊಳಗೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕೆಲಸ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಗೋವಾ, ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರ ಯೋಜನೆಯನ್ನು ಶೀಘ್ರ ಅನುಷ್ಟಾನಕ್ಕೆ ಸಹಕಾರ
ನೀಡಬೇಕು.
ರಾಜ್ಯ ಸರ್ಕಾರ ಆ ನಿಟ್ಟಿನಲ್ಲಿ ಮುಂದಾಗಬೇಕು. ಟೈಗರ್ ಕಾರಿಡಾರ್ (ಹುಲಿ ಸಂರಕ್ಷಿತ ಅರಣ್ಯ) ಅನುಮತಿ ಪಡೆದುಕೊಳ್ಳಬೇಕು. ಜೊತೆಗೆ ಗೋವಾದ ಪರಿಸರ
ಇಲಾಖೆಯ ಪರವಾನಗಿ ಚುನಾವಣೆ ಪೂರ್ವದಲ್ಲಿ ಈ
ಭಾಗದ ಜನರಿಗೆ ನೀರು ಒದಗಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸೇನಾ ಕರ್ನಾಟಕ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಆಲೇಕರ, ರಾಜ್ಯ ವಕ್ತಾರ ಗುರು ರಾಯನಗೌಡ್ರ, ಗದಗ ಜಿಲ್ಲಾ ಸಂಚಾಲಕರಾದ ಮಂಜಯ್ಯ ಅರವಟಗಿಮಠ, ತಾಲೂಕು ಸಂಪರ್ಕ ಪ್ರಮುಖರಾದ ಬಸವರಾಜ ಗುಡಿ, ಸದಸ್ಯರಾದ ಮಹೇಶ ನಾವಳ್ಳಿ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news




