ಹುಬ್ಬಳ್ಳಿ ಆನೆ ದಂತದಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೆಳಗಾವಿ ಹಾಗೂ ಮಹಾರಾಷ್ಟ್ರ ಮೂಲದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಸಿ.ಐ.ಡಿ ವಿಶೇಷ ಅರಣ್ಯ ಸಂಚಾರಿ ದಳದ ತಂಡ ಯಶಸ್ವಿಯಾಗಿದೆ.
ಕೊಲ್ಲಾಪುರ ಮೂಲದ ಸಾತ್ ಜಮಾದಾರ್ , ವಿಜಯ ಕುಂಬಾರ, ಸಾಗರ ಪುರಾಣಿಕ, ನಿಪ್ಪಾಣಿಯ ವಿನಾಯಕ ಕಾಂಬ್ಳೆ, ದಾನಾಜಿ ಪಾಟೀಲ್ ಬಂಧಿತ ಆರೋಪಿಗಳಾಗಿದ್ದಾರೆ. ಬಂದಿತರಿಂದ ಆನೆ ದಂತದಿಂದ ತಯಾರಿಸಿದ್ದ 384 ಗ್ರಾಂ ತೂಕದ ಅಲಂಕಾರ ಪೆಟ್ಟಿಗೆ, 112 ಗ್ರಾಂ ತೂಕದ ಕೈಗಡುಗ, 350 ಗ್ರಾಂ ಆಯತಾಕಾರದ ಪೆಟ್ಟಿಗೆ, 279 ಗ್ರಾಂ ಮೊಟ್ಟೆ ಆಕಾರದ ಪೆಟ್ಟಿಗೆ ವಶಕ್ಕೆ ಪಡೆದಿದ್ದಾರೆ. ಇವುಗಳ ಮೌಲ್ಯ ಕೋಟ್ಯಾಂತರ ರೂಪಾಯಿ ಎನ್ನಲಾಗಿದೆ.

ಇನ್ನು ಸಿ.ಐ.ಡಿ ಅರಣ್ಯ ಸಂಚಾರದಳ ತಂಡ ಖಚಿತ ಮಾಹಿತಿ ಮೆರೆಗೆ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದ ಬಳಿ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದಾಗ, ರಾಜಸ್ಥಾನದ ಒಂದು ಸಂತೆಯಲ್ಲಿ ಸಾಧು ಸಂತರ ಬಳಿ ಖರೀದಿಸಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಇನ್ನು ಈ ಪ್ರಕರಣವನ್ನು ಹುಬ್ಬಳ್ಳಿಯ ಸಿ.ಐ.ಡಿ ವಿಭಾಗದ ಪೊಲೀಸ್ ಉಪಾಧೀಕ್ಷಕ ಮುತ್ತಣ ಸರವಗೋಳ, ಸಬ್ ಇನ್ಸ್ಪೆಕ್ಟರ್ ಪ್ರಸಾದ್ ಪಣೇಕರ್, ಎಮ್.ಎ.ಪಾಠಕ್, ಅಶೋಕ ನಾಗರಳ್ಳಿ, ರವೀಂದ್ರ ಗೋನೇನವರ, ಎಸ್.ಹೆಚ್.ಹುಲಗೇರ, ದಿವ್ಯ ಎಸ್ ನಾಯಕ ಮತ್ತು ಶ್ರೀ ಕೆ ವಿ ಶರತಚಂದ್ರ ತಂಡ ಪತ್ತೆ ಮಾಡಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.