ಬೆಳಗಾವಿ: ಜಿಲ್ಲೆಯ ಕಿತ್ತೂರ ತಾಲೂಕಿನ ಅವರಾದಿ ಗ್ರಾಮದಿಂದ ಆರಂಭವಾಗುವ ತುಪ್ಪರಿಹಳ್ಳವೂ ನವಲಗುಂದ ಕ್ಷೇತ್ರದಲ್ಲಿ ಬರುತ್ತಿದ್ದ ಹಾಗೇ ಹಲವು ಸಮಸ್ಯೆಗಳನ್ನ ಉಂಟು ಮಾಡುತ್ತಿತ್ತು. ಇದೇ ಕಾರಣದಿಂದ ಹಲವರು ಪ್ರಾಣವನ್ನ ಕಳೆದುಕೊಂಡಿದ್ದಾರೆ. ಜಾನುವಾರುಗಳು ನೀರು ಪಾಲಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಯೂ ನಾಶವಾಗುತ್ತ ಬಂದಿದ್ದು, ಸ್ವತಃ ನವಲಗುಂದ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು, ಜನರ ಪ್ರಾಣ ಉಳಿಸಲು ಹಲವು ಬಾರಿ ಹಳ್ಳದ ದಡದಲ್ಲಿಯೇ ರಾತ್ರಿ ಕಳೆಯುವಂತಾಗಿತ್ತು. ಆದರೆ ಮೊನ್ನೆಯಷ್ಟೇ ಜಿಲ್ಲೆಗೆ ಆಗಮಿಸಿದ ಪ್ರಧಾನಿಯವರು ಶಾಶ್ವತ ಪರಿಹಾರ ಘೋಷಣೆ ಮಾಡಿದ ಬೆನ್ನಲ್ಲೇ ಈಗ ಕಾಮಗಾರಿ ಆರಂಭಗೊಂಡಿದ್ದು, ರೈತರಲ್ಲಿ ಹಾಗೂ ನವಲಗುಂದ ತಾಲ್ಲೂಕಿನ ಜನರಲ್ಲಿ ಸಂತಸ ಮನೆ ಮಾಡಿದೆ.
ಇನ್ನೂ ತುಪ್ಪರಿಹಳ್ಳದ ಸಮಸ್ಯೆ ಅರಿತಿದ್ದ ಶಂಕರ ಪಾಟೀಲ ಮುನೇನಕೊಪ್ಪ, 2010 ರಲ್ಲಿ ಈ ಹಳ್ಳವನ್ನ ಜಲಸಂಪನ್ಮೂಲ ಇಲಾಖೆಗೆ ಸೇರುವಂತೆ ನೋಡಿಕೊಂಡರು. ಇದೀಗ ತುಪ್ಪರಿಹಳ್ಳದ ಶಾಶ್ವತ ಪರಿಹಾರಕ್ಕೆ ಕಾಮಗಾರಿ ಆರಂಭಕ್ಕೆ ಸ್ವತಃ ಪ್ರಧಾನಿ ಚಾಲನೆ ನೀಡಿದ್ದು, 312 ಕೋಟಿ ವೆಚ್ಚದ ಮೊದಲ ಹಂತದಲ್ಲಿ 150 ಕೋಟಿ ಕಾಮಗಾರಿ ಆರಂಭವಾಗಿದೆ. ಈ ಕಾಮಗಾರಿಯ ಬಗ್ಗೆ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ..
ಒಟ್ಟಿನಲ್ಲಿ ದಶಕಗಳ ಹೋರಾಟಕ್ಕೆ ಹಾಗೂ ಸ್ಥಳೀಯರ ಕಣ್ಣೀರಿಗೆ ಈಗ ಬೆಲೆ ಬಂದಂತಾಗಿದ್ದು, ಈಗ ತುಪ್ಪರಿಹಳ್ಳದ ಶಾಶ್ವತ ಪರಿಹಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಯಾವುದೇ ಅಡೆತಡೆಗಳಿದ್ದರೂ ಎಲ್ಲವನ್ನೂ ಮೆಟ್ಟಿ ನಿಂತು ಜನರು ಸಂತೋಷದಿಂದ ಜೀವನ ನಡೆಸಲು ಈ ನಿರ್ಧಾರ ಸಾಕ್ಷಿಯಾಗಬೇಕಿದೆ..


bigtvnews | Hubli Dharwad News | Kannada News | Karnataka News Hubli News | News In Hubli | Local news





