ಧಾರವಾಡ: ಮೀಸಲಾತಿ ಎನ್ನುವುದು ಹುಡುಗಾಟ ವಿಚಾರವಾಗಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ತಿರುಗೇಟು ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗದ ವರದಿ ಸಿದ್ಧವಾಗಿ 25 ವರ್ಷ ಆಗಿತ್ತು. ಈ ವರದಿ ಧೂಳು ಹಿಡಿದಿತ್ತು. ಮೀಸಲಾತಿ ಕೊಡಬಾರದು ಎಂದು ಮೊದಲಿನವರಿಗೆ ಯಾರಾದರೂ ಹೇಳಿದ್ದರಾ? ಆ ವರದಿ ತರಿಸಿಕೊಂಡು ಹಾಗೇ ಇಟ್ಟಿದ್ದರು. ಆದರೆ, ನಮ್ಮ ಸಿಎಂ ಬಹಳ ಧೈರ್ಯದಿಂದ ಅದರ ಅನುಷ್ಠಾನಕ್ಕೆ ಹೊರಟಿದ್ದಾರೆ. ಮೀಸಲಾತಿಗೆ ಹೋರಾಟ ಮಾಡಿದವರೆಲ್ಲ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಅನೇಕರು ಅನೇಕ ರೀತಿ ಮಾತನಾಡುತ್ತಿದ್ದಾರೆ. ತಾವೂ ವರದಿ ಅನುಷ್ಠಾನ ಮಾಡಲಿಲ್ಲ ಹಾಗಂತ ಉಳಿದವರೂ ಮಾಡಬಾರದಾ? ಅನಾವಶ್ಯಕವಾಗಿ ಕಾಲು ಎಳೆಯುವ ಪ್ರವೃತ್ತಿ ಇವರದ್ದು. ನಾವು ಯಾರ ಮೀಸಲಾತಿಯನ್ನು ಕಸಿದುಕೊಂಡಿಲ್ಲ. ಸಂವಿಧಾನಾತ್ಮಕವಾಗಿ ಯಾರ ಮೀಸಲಾತಿಯನ್ನೂ ಕಸಿದುಕೊಳ್ಳಲು ಆಗುವುದಿಲ್ಲ. ಯಾರ ಹಕ್ಕನ್ನೂ ನಾವು ಕಸಿದುಕೊಂಡಿಲ್ಲ ಎಂದರು.
ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಕಾಂಗ್ರೆಸ್ನವರ ಹಾಗೆ ಅಭ್ಯರ್ಥಿಗಳಲ್ಲಿ ಭಿನ್ನಾಭಿಪ್ರಾಯವಿಲ್ಲ. ಅವರಲ್ಲಿ ನಾಯಕರೇ ಬಡಿದಾಡುತ್ತಿದ್ದಾರೆ. ಸಿದ್ದರಾಮಯ್ಯ ಒಮ್ಮೆ ಬಾದಾಮಿ ಎನ್ನುತ್ತಾರೆ ಒಮ್ಮೆ ಮೈಸೂರು, ಕೊಪ್ಪಳ ಎನ್ನುತ್ತಾರೆ ಎಂದು ಲೇವಡಿ ಮಾಡಿದರು.
ನಮ್ಮಲ್ಲಿ ಯಾವ ಗುಜರಾತ್ ಮಾದರಿಯ ಟಿಕೆಟ್ ಹಂಚಿಕೆ ನಡೆಯುವುದಿಲ್ಲ. ಸಹಜವಾಗಿ ಅಭ್ಯರ್ಥಿಗಳ ಮಧ್ಯೆ ಟಿಕೆಟ್ಗಾಗಿ ಪೈಪೋಟಿ ಇರುತ್ತದೆ. ಟಿಕೆಟ್ ಕೇಳುವುದು ತಪ್ಪಲ್ಲ. ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಅಳೆದು ತೂಗಿ ಟಿಕೆಟ್ ಕೊಟ್ಟಿರುತ್ತಾರೆ. ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಾನೇ ಧಾರವಾಡ ಜಿಲ್ಲಾ ಮಂತ್ರಿಯಾಗಿ ಮತ್ತೆ ಬರುತ್ತೇನೆ ಎಂದರು.