ಹುಬ್ಬಳ್ಳಿ: ಖೊಟ್ಟಿ ದಾಖಲೆ ಸೃಷ್ಟಿಸಿ ಡಾ.ಕ್ರಾಂತಿಕಿರಣ ಅವರು ಎಸ್.ಸಿ ಸಮೂದಾಯಕ್ಕೆ ಮೀಸಲಾದ ಹು-ಧಾ ಪೂರ್ವ ವಿಧಾನಸಭಾ ಮತಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡಿದ್ದು, ಈ ಮೂಲಕ ಎಸ್.ಸಿ ಸಮೂದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ (ರಿ) ಯಿಂದ ಕಾನೂನು ಹೋರಾಟ ಮಾಡಲಾಗುವುದು ಎಂದು ಸಮಿತಿಯ ರಾಜ್ಯಾಧ್ಯಕ್ಷ ಮಾರುತಿ ದೊಡ್ಡಮನಿ ತಿಳಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಡಾ.ಕ್ರಾಂತಿಕಿರಣ ಈ ಹಿಂದೆ ಸೇವೆ ಸಲ್ಲಿಸಿದ ಕಿಮ್ಸ್ ಹಾಗೂ ಅವರ ಮಕ್ಕಳು ವಿಧ್ಯಾಭ್ಯಾಸ ಮಾಡುವ ಶಾಲೆಯಲ್ಲಿ ಹುಡುಕಾಟ ನಡೆಸಿದಾಗ ಅವರೊಬ್ಬ ಓರ್ವ ಹಿಂದೂ ಒಕ್ಕಲಿಗ ಎಂಬುದು ದೃಢವಾಗಿದೆ. ಆದರೂ ಸಹಿತ ಡಾ.ಕ್ರಾಂತಿಕಿರಣ ತಾವು ಪರಿಶಿಷ್ಟ ಜಾತಿಯವನೆಂಬ ಖೊಟ್ಟಿ ದಾಖಲೆಯನ್ನು ಇಟ್ಟುಕೊಂಡು ನಾಮಪತ್ರ ಸಲ್ಲಿಕೆ ಮಾಡಿ, ಜನರಿಗೆ ದ್ರೋಹ ಮಾಡಿದ್ದಾರೆ. ಈ ಬಗ್ಗೆ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗಳು, ಚುನಾವಣಾ ಅಧಿಕಾರಿಗಳಿಗೆ ತನಿಖೆಗೆ ದೂರು ಕೊಟ್ಟಿದ್ದೇವೆ. ಅದಾಗ್ಯೂ ಅಧಿಕಾರಿಗಳು ಹಾರಿಕೆ ಉತ್ತರ ಕೊಡುತ್ತಾ, ಪ್ರಕರಣವನ್ನು ಮರೆಮಾಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಡಾ.ಕ್ರಾಂತಿಕಿರಣ ಅವರ ಪ್ರಕರಣದಂತೆ ಬೀದರ ಜಿಲ್ಲೆಯಲ್ಲಿ ಅಲ್ಲಿನ ಸ್ಥಳೀಯ ಅಭ್ಯರ್ಥಿ ನಾಮಪತ್ರ ಸಲ್ಲಿಸಿದಾಗ ಖೊಟ್ಟಿ ದಾಖಲೆ ಸೃಷ್ಟಿಸಿದಾಗ ಅವರ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ರದ್ದು ಮಾಡಿದ್ದಾರೆ. ಅದರಂತೆ ಹು-ಧಾ ಪೂರ್ವ ಮೀಸಲು ಕ್ಷೇತ್ರದಲ್ಲಿ ಮೂಲ ಎಸ್.ಸಿ ಸಮುದಾಯದ ಜನರಿಗೆ ಬಿಜೆಪಿ ಟಿಕೆಟ್ ಕೊಡಬೇಕು. ಇಲ್ಲದಿದ್ದರೆ ಖೊಟ್ಟಿ ದಾಖಲೆ ಸೃಷ್ಟಿಸಿದ ಅಭ್ಯರ್ಥಿ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾನೂನು ಘಟಕದ ರಾಜ್ಯಾಧ್ಯಕ್ಷ ಕೆ.ಹರಿಪ್ರಸಾದ, ಉಪಾಧ್ಯಕ್ಷ ಸಂತೋಷ ತಲ್ಲೂರು, ರವೀಂದ್ರ ಕಲ್ಯಾಣಿ, ಆ.ಸುರೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





