Breaking News

ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಸುವ ಗುರಿ: ಸಚಿವ ಎಂ.ಬಿ ಪಾಟೀಲ್

ಬೆಂಗಳೂರು: ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ (ರೂ 85 ಲಕ್ಷ ಕೋಟಿ) ಆರ್ಥಿಕತೆಯಾಗಿ ಬೆಳೆಸುವ ಗುರಿಯೊಂದಿಗೆ ಉದ್ಯಮ ಪರಿಣಿತರ ಅಭಿಪ್ರಾಯ ಆಧರಿಸಿ 2025-30ರ ಅವಧಿಗೆ ಪ್ರಗತಿ ಕೇಂದ್ರಿತ ಕೈಗಾರಿಕಾ ನೀತಿ ರೂಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದರು.
ಅಮೆರಿಕ ಚೇಂಬರ್ ಆಫ್ ಕಾಮರ್ಸ್ ಇನ್ ಇಂಡಿಯಾ (ಆಮ್ ಚಾಮ್) ಇಲ್ಲಿ‌ನ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಪರಿವರ್ತನೆಯಾಗುತ್ತಿರುವ ಕರ್ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಗತ್ಯಕ್ಕೆ ತಕ್ಕಂತೆ ಆಗಾಗ್ಗೆ ತಿದ್ದುಪಡಿಗೆ ಅವಕಾಶ ಇರುವ ಹಾಗೆ ನೀತಿ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ವಲಯಗಳ ಉದ್ದಿಮೆದಾರರು ನೀತಿ ರೂಪಿಸುವಲ್ಲಿ ಸಹಕರಿಸಬೇಕು. ಎಲ್ಲಾ ಹಿತಾಸಕ್ತಿದಾರರೊಂದಿಗೆ ಸಮಾಲೋಚನೆ ನಡೆಸಿ ಮುಂದುವರಿಸಲಾಗುವುದು ಎಂದರು.
ಆರ್ಥಿಕತೆಯ ಗುರಿಗೆ ಅನುಗುಣವಾಗಿ ಹೆಚ್ಚಿನ ಸಹಭಾಗಿತ್ವಗಳನ್ನು ಸಾಧಿಸಲಾಗುವುದು ಜೊತೆಗೆ, ಮೂಲಸೌಕರ್ಯ, ಕೌಶಲಾಭಿವೃದ್ಧಿ ಮತ್ತು ತಂತ್ರಜ್ಞಾನ ಅಳವಡಿಕೆಯಲ್ಲಿನ ಕೊರತೆಗಳನ್ನು ನಿವಾರಿಸಲು ಒತ್ತು ನೀಡಲಾಗುವುದು. ಹೊಸದಾಗಿ ಸ್ಥಾಪನೆಯಾಗುತ್ತಿರುವ ಉದ್ದಿಮೆಗಳ ಬೇಡಿಕೆಗಳನ್ನು ಈಡೇರಿಸಲು ನಮ್ಮ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸಲು ಗಮನ ಕೇಂದ್ರೀಕರಿಸಲಾಗುವುದು. ಸರ್ಕಾರಿ ಸಂಸ್ಥೆಗಳ ನೆರವಿನಿಂದ ಸಮಗ್ರ ಕೌಶಲ ಕೊರತೆ ಅಧ್ಯಯನ ಕೈಗೊಳ್ಳಲಾಗುವುದು. ಈ ಮೂಲಕ, ಪ್ರಸ್ತುತ ಇರುವ ಕೌಶಲಗಳು ಯಾವುವು ಹಾಗೂ ಉದ್ದಿಮೆಗಳಿಗೆ ಅಗತ್ಯವಿರುವ ಕೌಶಲಗಳು ಯಾವುವು ಎಂಬುದನ್ನು ಗುರುತಿಸಲಾಗುವುದು. ಇದನ್ನು ಆಧರಿಸಿ ಗುರಿ ಕೇಂದ್ರಿತ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.
ಕೇವಲ ಆರ್ಥಿಕ ಬೆಳವಣಿಗೆ‌ ಮಾತ್ರವಲ್ಲದೆ ನಮ್ಮ ವಿವಿಧ ಸಮುದಾಯಗಳ ಜನರನ್ನು ಮೇಲೆತ್ತುವಂತಹ ಅವಕಾಶಗಳ ಸೃಷ್ಟಿಗೆ ಸರ್ಕಾರ ಆದ್ಯತೆ ನೀಡಲಿದೆ. ಯುವ ಜನತೆಯ ಸಬಲೀಕರಣದ ಮೂಲಕ ರಾಜ್ಯದಲ್ಲಿ ಎಲ್ಲರನ್ನೂ ಒಳಗೊಳ್ಳುವಂತಹ ಪ್ರಗತಿ ಸಾಧಿಸುವುದು ನಮ್ಮ ಉದ್ದೇಶವಾಗಿದೆ. ಉದ್ಯಮದ ನಿರೀಕ್ಷೆ ಹಾಗೂ ನಾಗರಿಕರ ನಿರೀಕ್ಷೆ‌ ಇವೆರಡಕ್ಕೂ ಸರಿಹೊಂದುವಂತಹ ಪರಿಸರ ಸೃಷ್ಟಿಸಲಾಗುವುದು ಎಂದು ಪಾಟೀಲ್ ನುಡಿದರು.

Share News

About BigTv News

Check Also

ಅಯ್ಯೋ ಪಾಪ ಅಂದಿದ್ದೇ ತಪ್ಪಾಯ್ತು: ಎಂಬಿಬಿಎಸ್ ವಿದ್ಯಾರ್ಥಿನಿ ಸ್ನೇಹಿತೆಯ ಸೋಗಿನಲ್ಲಿ ಒಂದು ಲಕ್ಷ ರೂ. ವಂಚನೆ!

ವಿದೇಶದಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಪಾವತಿಸುವ ತುರ್ತು ಪರಿಸ್ಥಿತಿಯನ್ನು ಬಳಸಿಕೊಂಡು ಸೈಬರ್ ವಂಚಕರು ಬೆಂಗಳೂರಿನ ಕುಟುಂಬವೊಂದಕ್ಕೆ …

Leave a Reply

Your email address will not be published. Required fields are marked *