ಹುಬ್ಬಳ್ಳಿ ಪ್ರತಿ ಬಸ್ಗೆ ರೂ. 40 ಲಕ್ಷ ವೆಚ್ಚದಂತೆ 285 ಹೊಸ ಬಸ್ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಮುಂದಿನ ಎರಡು ಮೂರು ತಿಂಗಳಲ್ಲಿ ಸಂಸ್ಥೆಗೆ ಹೊಸ ಬಸ್ಗಳು ಬರಲಿವೆ. ಸಂಸ್ಥೆಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಬಸವರಾಜ ಕೆಲಗಾರ ಹೇಳಿದರು.ಇಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಸಕಾಲದಲ್ಲಿ ಸಿಬ್ಬಂದಿಗಳಿಗೆ ವೇತನ ನೀಡಲು ಕ್ರಮ ವಹಿಸಲಾಗುವುದು. ನೌಕರರ ವೇತನ ಪರಿಷ್ಕರಣೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಬಸ್ ಪಾಸ್ ವಿತರಿಸಲಾಗಿದೆ. ಕಾರ್ಮಿಕ ಇಲಾಖೆಯಿಂದ ಬಸ್ ಪಾಸ್ ಹಣ ಬರಲಿದೆ. ಅಲ್ಲದೇ ಹಳೆಯ ಬಸ್ಗಳನ್ನು ರೂ.1 ಲಕ್ಷ ವೆಚ್ಚದಂತೆ 100 ಬಸ್ಗಳನ್ನು ಖರೀದಿಸಲಾಗಿರುತ್ತದೆ. ಡಿಸೇಲ್ ಬೆಲೆ ಹೆಚ್ಚಳದಿಂದ ಸಂಸ್ಥೆಯು ನಷ್ಟಕ್ಕೆ ಸಿಲುಕಿದೆ ಎಂದು ತಿಳಿಸಿದರು.ಸಂಸ್ಥೆಯಲ್ಲಿ ಪ್ರಸ್ತುತ 4861 ವಾಹನಗಳು ಕಾರ್ಯಾಚರಣೆಯಲ್ಲಿವೆ. ಪ್ರತಿದಿನ 17 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದೊಂದಿಗೆ ನೌಕರರಿಗೆ ರೂ. 50 ಲಕ್ಷ ಅಪಘಾತ ವಿಮೆ ಯೋಜನೆ ಜಾರಿಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಹಾಗೂ ರಿಯಾಯತಿ ಬಸ್ ಪಾಸ್, ಅಂಗವಿಕಲರ ಪಾಸ್, ಅಂಧರ ಪಾಸ್, ಸ್ವಾತಂತ್ರ ಹೋರಾಟಗಾರರ ಪಾಸ್, ಹುತಾತ್ಮ ಯೋಧರ ಪಾಸ್, ಹಿರಿಯ ನಾಗರಿಕರ ಪಾಸು ಸೇರಿದಂತೆ ವಿವಿಧ ಪಾಸುಗಳನ್ನು ವಿತರಿಸಲಾಗುತ್ತಿದೆ ಎಂದರು.

ಸಂಸ್ಥೆಯ ಉಪಾಧ್ಯಕ್ಷರಾದ ಶಿವಾನಂದ ಮ್ಯಾಗೇರಿ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಭರತ್ ಎಸ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





