ಆಟ್ಟಿಟ್ಯುಡ್ ವುಮೆನ್ ಫೌಂಡೇಶನ್ (ರಿ) ವತಿಯಿಂದ ಹಳೆ ಹುಬ್ಬಳ್ಳಿಯ ಹೆಗ್ಗೇರಿಯಲ್ಲಿರುವ ಮಂಜುನಾಥ ಪ್ರೌಢ ಶಾಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಬಿ.ಜೆ.ಪಿ. ರಾಜ್ಯ ಪ್ರಕೋಷ್ಟಗಳ ಸಹಸಂಯೋಜಕರಾದ ಶ್ರೀ ಜಯತೀರ್ಥ ಕಟ್ಟಿಯವರು ಮಾತನಾಡುತ್ತ ಎಲ್ಲಿ ಮಹಿಳೆಯರಿಗೆ ಗೌರವ ಇರುತ್ತದೋ ಅಲ್ಲಿ ಯಶಸ್ಸು ಇದ್ದೇ ಇರುತ್ತದೆ ಮತ್ತು ಅಲ್ಲಿ ದೇವತೆಗಳು ಸುಪ್ರೀತರಾಗಿರುತ್ತಾರೆ ಎಂದು ಹೇಳಿದರು. ಇಂದು ಆಟೋ ಚಲಾಯಿಸುವುದರಿಂದ ಹಿಡಿದು ವಿಮಾನದ ಪೈಲಟ್ ವರೆಗೂ ಎಲ್ಲ ಕ್ಷೇತ್ರಗಳಲ್ಲೂ ಇಂದು ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶ- ಧರ್ಮ ಸಂರಕ್ಷಣೆಯಲ್ಲೂ ಕೂಡ ಮಹಿಳೆಯರು ಕತ್ತಿ ಹಿಡಿದು ಹೋರಾಡಿದ್ದಾರೆ, ಕಿತ್ತೂರ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಇನ್ನೂ ಅನೇಕರುಗಳು ನಮಗೆ ಆದರ್ಶ. ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇವರುಗಳೇ ಸಾಕ್ಷಿ ಎಂದು ಮಹಿಳಾ ಶಕ್ತಿಯ ಬಗ್ಗೆ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ರಾಜಶ್ರೀ ಬಗಲಿ ಅಧ್ಯಕ್ಷರು ಆಟ್ಟಿಟ್ಯುಡ್ ವುಮೆನ್ ಫೌಂಡೇಶನ್ (ರಿ) ರವರು ಮಾತನಾಡಿ ಮಹಿಳೆಯರ ಆರೋಗ್ಯ ಹಾಗೂ ಜೀವನ ಶೈಲಿಯ ಪ್ರಾಮುಖ್ಯತೆ ಬಗ್ಗೆ ಬೆಳಕು ಚೆಲ್ಲಿದರು.ಇದೇ ಸಂದರ್ಭದಲ್ಲಿ ಶಾಲೆಯ ಮಹಿಳಾ ಶಿಕ್ಷಕರುಗಳಿಗೆ, ಮಕ್ಕಳ ಆರೈಕೆ ಮಾಡುವ ಆಯಾಗಳಿಗೆ ಶಾಲು ಪೇಟ ಮತ್ತು ಸ್ವತಂತ್ರ್ಯ ವೀರ ಸಾವರ್ಕರ್ ರವರ ಪುಸ್ತಕವನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಯಲ್ಲಪ್ಪ ಬಾಗಲಕೋಟೆ ,ಶ್ರೀ ಬಸ್ಸು ಸ್ವಾಮೀಜಿ,ಶ್ರೀಮತಿ ವಿಜಯಲಕ್ಷ್ಮಿ ಕಾಟಕರ್,ಶ್ರೀಮತಿ ಅಂಜಲಿ ಲಚ್ಚನ್ನವರ್, ಶ್ರೀ ಸಂಜು. ಧುಮಕನಾಳ, ಶ್ರೀ ದೇವಾನಂದ್ ಹಿರೇಮಠ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಶ್ರೀ ಗಂಗಾಧರ ಬಾನಿ ಸ್ವಾಗತಿಸಿದರು,
ಶ್ರೀ ಮೋತಿಲಾಲ್ ರಾಠೋಡ ನಿರೂಪಣೆ ಮಾಡಿದರು. ಶ್ರೀಮತಿ ಬಿಜಿ ಹಿರೇಮಠ ವಂದನಾರ್ಪಣೆ ಮಾಡಿದರು.


bigtvnews | Hubli Dharwad News | Kannada News | Karnataka News Hubli News | News In Hubli | Local news





