ಹುಬ್ಬಳ್ಳಿ: ನಮ್ಮ ಜೊತೆಗೆ ಓರ್ವ ಸೂಪರ್ ಸ್ಟಾರ್ ಬಂದಿದ್ದಾರೆಂಬ, ಆತಂಕ, ಕಳವಳ ವಿರೋಧಿಗಳಿಗೆ ಕಾಡುತ್ತಿದೆ. ಹೀಗಾಗಿ ಅವರ ಸೋಲು ಗೋಡೆಯ ಮೇಲೆ ಕಾಣುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀಪ್ ಅವರನ್ನು ಸ್ಟಾರ್ ಪ್ರಾಚಾರಕರಾಗಿ ತೆಗೆದುಕೊಂಡ ಹಿನ್ನೆಲೆ ಎದುರಾದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿ, ಸ್ಟಾರ್ ನಟರನ್ನು ಚುನಾವಣೆಯಲ್ಲಿ ಪ್ರಚಾರಕ್ಕೆ ಬಳಕೆ ಮಾಡುವುದು ಹೊಸದಲ್ಲ, ದೇಶದಾದ್ಯಂತ ನಡೆದಿದೆ. ಇದೀಗ ರಾಜ್ಯದಲ್ಲಿ ಆಗತ್ತಿದೆ. ಈ ಹಿಂದೆ ಕುಮಾರಸ್ವಾಮಿ ಮತ್ತು ನಾನು 1996 ರಲ್ಲಿ ರಾಮನಗರ ಉಪಚುನಾವಣೆಯಲ್ಲಿ ಅಂಬರೀಶ್ ಅವರನ್ನು ಕರೆತಂದು ನಿಲ್ಲಿಸಿ, ಪ್ರಚಾರ ಮಾಡಿದ್ದೇವೆ. ಅದು ಕುಮಾರಸ್ವಾಮಿ ಅವರಿಗೆ ನೆನಪು ಇರಬಹುದು ಅಂತಾ ಅಂದುಕೊಳ್ಳುತ್ತೇನೆ. ಇದೀಗ ಒಬ್ಬ ಸೂಪರ್ ಸ್ಟಾರ್ ನಮ್ಮ ಜೊತೆಗೆ ಇದ್ದಾರೆಂಬ ಕಳವಳ ಕಾಡುತ್ತಿದೆ. ಹೀಗಾಗಿ ಸೋಲು ಗೋಡೆಯ ಮೇಲೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷದಲ್ಲಿಯೂ ಹಲವರು ಸ್ಟಾರ್ ಗಳಿದ್ದಾರೆ. ಹಲವರನ್ನು ತೆಗೆದುಕೊಂಡಿದ್ದಾರೆ. ಅವರ ಬಗ್ಗೆ ನಾವು ಮಾತಾಡಿಲ್ಲ. ನಮಗೆ ಗೆಲುವಿನ ವಿಶ್ವಾಸ ಇದೆ. ಅವರಿಗೆ ಸೋಲಿನ ವಿಶ್ವಾಸ ಇದೆ. ಹೀಗಾಗಿ ನಟ ಸುದೀಪ್ ಕುರಿತು ಟೀಕೆ ಮಾಡತ್ತಾರೆಂದು ತಿಳಿಸಿದರು.
ದೆಹಲಿಯಲ್ಲಿ ನಾಳೆ ಪಾರ್ಲಿಮೆಂಟ್ ಬೋರ್ಡ್ ನ ಸಭೆ ನಡೆಯಲಿದೆ. ಈಗಾಗಲೇ ಕ್ಷೇತ್ರ, ಜಿಲ್ಲಾಮಟ್ಟದಲ್ಲಿ ಅಭಿಪ್ರಾಯ ಸಂಗ್ರಹ ಸಭೆ ನಡೆದಿದೆ. ರಾಜ್ಯ ಸಮಿತಿ ಕೂಡಾ ಪರಿಶೀಲನೆ ಸಭೆ ಮಾಡಿ ಆಕಾಂಕ್ಷಿಗಳ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಿದೆ. ನಾಳೆ ಪಾರ್ಲಿಮೆಂಟ್ ಬೋರ್ಡ್ ನಲ್ಲಿ ಚರ್ಚಿಸಿ ಅಂತಿಮ ಗೊಳಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗತ್ತಾರೆಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಕಲಘಟಗಿ ಕ್ಷೇತ್ರದಿಂದ ನಾಗರಾಜ್ ಛಬ್ಬಿ ಅವರು ನಮಗೆ ಏನೂ ಸಂಪರ್ಕ ಮಾಡಿಲ್ಲ. ಅದರ ಬಗ್ಗೆ ನಂಗೆ ಗೊತ್ತಿಲ್ಲ ಎಂದ ಅವರು, ಟಿಕೆಟ್ ಆಕಾಂಕ್ಷಿಗಳ ನಡುವೆ ಆಣೆಪ್ರಮಾಣದ ಕುರಿತು ಮಾತನಾಡಿ, ಇದು ಹೊಸದೆನ್ನಲ್ಲ, ಚುನಾವಣೆ ಬಂದಾಗ ಆ ಕ್ಷೇತ್ರದ ಹಿರಿಯರು ಬೇರೆ ಬೇರೆ ಕ್ರಮ ಮಾಡತ್ತಾ ಇರತ್ತಾರೆ. ಅದರ ಬಗ್ಗೆ ವಿಶ್ಲೇಷಣೆ ಮಾಡೋಕ್ಕೆ ಬರೋದಿಲ್ಲ ಎಂದರು.
ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆ ದೆಹಲಿಯಲ್ಲಿ ನಿರ್ಧಾರ ಆಗೋದು, ಅಲ್ಲಿಯೇ ಅಂತಿಮವಾಗಲಿದೆ. ಉಳಿದ ಕ್ಷೇತ್ರದಂತೆ ಅಂತಿಮವಾಗಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





