ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದ ಆವರಣದಲ್ಲಿರುವ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಹೆಡ್ಕಾನ್ಸ್ಟೇಬಲ್ ಗಂಗರಾಜು ವಿರುದ್ಧ ಕೆಂಪೇಗೌಡ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬೆನ್ನಲ್ಲೇ ಗಂಗರಾಜು ಅವರ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೋಟೆಲ್ ಮ್ಯಾನೆಜರ್ ಅಜಿತ್ ಎಂಬವರು ನೀಡಿದ ದೂರಿನ ಮೇರೆಗೆ ಗಂಗರಾಜು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಏರ್ಪೋರ್ಟ್ ಠಾಣೆಯಲ್ಲಿ ಹೆಡ್ಕಾನ್ ಸ್ಟೇಬಲ್ ಆಗಿದ್ದ ಗಂಗರಾಜು ಫೆ.10ರಂದು ರಾತ್ರಿ ಗಸ್ತು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಆದರೆ, ಅವರ ವ್ಯಾಪ್ತಿಗೆ ಬಾರದ ಏರ್ಪೋರ್ಟ್ನ ಅಲ್ಪಾ-1 ಕಟ್ಟಡದಲ್ಲಿರುವ ಹೋಟೆಲ್ಗೆ ತಡರಾತ್ರಿ 12.30ರ ಸುಮಾರಿಗೆ ತಮ್ಮ ಇಬ್ಬರು ಸಹೋದ್ಯೋಗಿಗಳ ಜತೆ ಹೋಗಿದ್ದಾರೆ. ನಂತರ ಕಾಫಿ ಕೊಡುವಂತೆ ಹೋಟೆಲ್ ಸಿಬ್ಬಂದಿಗೆ ಕೇಳಿದ್ದಾರೆ. ಆಗ ಸಿಬ್ಬಂದಿ ಟೋಕನ್ ತೆಗೆದುಕೊಂಡು ಬರುವಂತೆ ಹೇಳಿದ್ದಾನೆ. ಅದಕ್ಕೆ ಕೋಪಗೊಂಡ ಗಂಗರಾಜು, ಪೊಲೀಸರಿಗೆ ಟೋಕನ್ ಕೇಳುತ್ತಿಯಾ, ನಮಗೆ ಉಚಿತವಾಗಿ ಕಾಫಿಕೊಡಬೇಕು ಎಂದಿದ್ದಾರೆ.
ಆಗ ಮ್ಯಾನೆಜರ್ ಅಜಿತ್ ಸಾಧ್ಯವಿಲ್ಲ ಎಂದಿದ್ದಾರೆ ಎಂದು ಹೇಳಲಾಗಿದೆ. ಅದಕ್ಕೆ ಕೋಪಗೊಂಡ ಗಂಗರಾಜು, ಕೂಡಲೇ ಹೋಟೆಲ್ನ ಬಾಗಿಲು ಮುಚ್ಚುವಂತೆ ಬೆದರಿಸಿದ್ದಾರೆ. ಅಲ್ಲದೆ, ಹೋಟೆಲ್ನ ಕ್ಯಾಷಿಯರ್ಕೌಂಟರ್ನಲ್ಲಿ ಕುಳಿತಿದ್ದ ಮ್ಯಾನೆಜರ್ ಅಜಿತ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಹೋಟೆಲ್ ಮುಂಭಾಗದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೆ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ, ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕರ್ತವ್ಯಲೋಪ ಆರೋಪದ ಮೇರೆಗೆ ಗಂಗರಾಜು ಅಮಾನತು ಮಾಡುವಂತೆ ಹಿರಿಯ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗಂಗರಾಜು ಅವರನ್ನು ಈಶಾನ್ಯ ವಿಭಾಗದ ಡಿಸಿಪಿ ವಿಥುನ್ ಕುಮಾರ್ಅಮಾನತು ಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

