ಧಾರವಾಡ : ಮತದಾರರ ಯಾದಿ ತಯಾರಿಕೆಯಲ್ಲಿ ಚುನಾವಣಾ ಆಯೋಗ ನಿರ್ಲಕ್ಷ ತೋರಿದೆ. ಇದರ ಪರಿಣಾಮ ಸಾವಿರಾರು ಅರ್ಹ ಮತದಾರರ ಹೆಸರುಗಳು ಮತಪಟ್ಟಿಯಿಂದ ಕೈ ಬಿಟ್ಟು ಹೋಗಿವೆ. ಕೂಡಲೇ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಕೂಡಲೇ ಪರಿಶೀಲಿಸಬೇಕೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆಗ್ರಹಿಸಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಪಶ್ಚಿಮ ಮತಕ್ಷೇತ್ರದ ವಿವಿಧ ಪ್ರದೇಶಗಳಿಗೆ ಸಮೀಕ್ಷೆ ನಡೆಸಿದ್ದು ಸಾಕಷ್ಟು ಕುಟುಂಬಗಳಲ್ಲಿ ಚುನಾವಣಾ ಆಯೋಗದ ಗುರುತಿನ ಚೀಟಿ ಇದೆ. ಆದರೆ, ಮತಪಟ್ಟಿಯಲ್ಲಿ ಹೆಸರುಗಳಿಲ್ಲ. ಅಲ್ಲದೇ, ಮತಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗಾಗಿ ಮಹಾನಗರ ಪಾಲಿಕೆಯಲ್ಲಿರುವ ನೋಂದಣಿ ಕಚೇರಿಯಲ್ಲಿ ಅಧಿಕಾರಿಗಳೇ ಇರೋದಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಅರ್ಹ ಮತದಾರರು ಕೈ ಬಿಟ್ಟು ಹೋಗುವ ಸಾರ್ಧಯತೆ ಇದೆ. ಇದು ಉದ್ದೇಶಪೂರ್ವಕವೂ ಇರಬಹುದು ಎಂದು ಆರೋಪಿಸಿದ ಅವರು,ಯಾವ ಪ್ರದೇಶದಲ್ಲಿ ಎಷ್ಟು ಮತದಾರರ ಹೆಸರುಗಳು ಕೈ ಬಿಟ್ಟಿವೆ ಎಂಬುದರ ಪಟ್ಟಿ ನೀಡಿದರು.
ಕೆಲಗೇರಿ ಆಂಜನೇಯನಗರದಲ್ಲಿ ೪೦೦, ಜನ್ನತನಗರದಲ್ಲಿ ೩೦೦೦, ಲಕ್ಷ್ಮಿಸಿಂಗನಕೇರಿಯಲ್ಲಿ ೨೧೬೫, ಮಣಕಿಲ್ಲಾದಲ್ಲಿ ೧೦೭೦, ಜೈ ಭೀಮನಗರದಲ್ಲಿ ೬೭೦, ಶ್ರೀರಾಮನಗರದಲ್ಲಿ ೪೦೦ ಹೀಗೆ ವಿವಿಧೆಡೆ ಹಲವು ಮತದಾರರ ಹೆಸರು ಕೈ ಬಿಡಲಾಗಿದೆ. ಪಶ್ಚಿಮ ಕ್ಷೇತ್ರದಲ್ಲಿ ೩,೪೮೩೯೮ ಅರ್ಹ ಮತದಾರರಿದ್ದು ಸದ್ಯ ಮತಪಟ್ಟಿಯಲ್ಲಿ ೨೬೭೬೭೯ ಮಾತ್ರ ಹೆಸರಗಳಿದ್ದು ೮೦೭೧೯ ಮತದಾರರ ಹೆಸರು ಎಲ್ಲಿ ಹೋಗಿವೆ ಎಂಬುದೇ ತಿಳಿಯುತ್ತಿಲ್ಲ. ಆಡಳಿತ ಸರ್ಕಾರವಾಗಲಿ ಅಥವಾ ಅಧಿಕಾರಿಗಳಾಗಲಿ ಬೇಕಾದ ಹೆಸರು ಸೇರ್ಪಡೆ ಹಾಗೂ ಬೇಡವಾದರ ಹೆಸರು ತೆಗೆದುಹಾಕುತ್ತಿದ್ದಾರೆ ಎಂಬ ಬಲವಾದ ಸಂಶಯವಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ಮಾಡಿದಾಗ ಮತದಾರರನ್ನು ಕೈ ಬಿಟ್ಟ ಸಂಗತಿ ಬಯಲಾಗಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಮುಖ ಪಕ್ರಿಯೆ. ಮತದಾನದ ಹಕ್ಕು ಈ ರೀತಿ ಕಸಿದುಕೊಳ್ಳುವುದು ಸರಿಯಲ್ಲ. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದೇ ಹೋದಲ್ಲಿ ರಾಜ್ಯ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಬೇಕಾಗುತ್ತದೆ ಎಂದು ನೀರಲಕೇರಿ ಎಚ್ಚರಿಸಿದರು. ಸಮಾಜ ಸೇವಕ ಸಿದ್ದಣ್ಣ ಕಂಬಾರ ಸುದ್ದಿಗೋಷ್ಠಿಯಲ್ಲಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

