ಧಾರವಾಡ : ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನಕ್ಕೆ ಮಹಾಪೌರ ಈರೇಶ ಅಂಚಟಗೇರಿ ಬುಧವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿ, ಉದ್ಯಾನವನದಲ್ಲಿನ ಅವ್ಯವಸ್ಥೆ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಭೇಟಿ ವೇಳೆ ವಾಯುವಿಹಾರಕ್ಕೆ ಬಂದ ಸಾರ್ವಜನಿಕರ ಅಹವಾಲು ಆಲಿಸಿದ ಅವರು. ಉದ್ಯಾನವನದಲ್ಲಿನ
ಪಾದಚಾರಿ ಮಾರ್ಗ, ಮರ ಮತ್ತು ಬಳ್ಳಿಗಳ ಪೋಷಣೆ ಕೊರತೆ, ಹಾಳಾದ ವಿದ್ಯುದ್ದೀಪಗಳ ಕಂಬ, ಅಲ್ಲಲ್ಲಿ ಕಸದ ಸಂಗ್ರಹ, ನೀರು ಕಾಣದ ಶೌಚಾಲಯ, ಬೀದಿ ನಾಯಿಗಳ ತಿರುಗಾಟ ಇನ್ನಿತರ ಅವ್ಯವಸ್ಥೆಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಹೃದಯ ಭಾಗದಲ್ಲಿರುವ ರಾಣಿ ಚೆನ್ನಮ್ಮ ಉದ್ಯಾನವನದ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದ ಮೇಯರ ಅಂಚಟಗೇರಿ, ಅಲ್ಲಿನ ಲೋಪಗಳತ್ತ ಗಮನಹರಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ವಚ್ಛತೆ, ದೀಪಗಳ, ನೀರು ಸಂಗ್ರಹ ತೊಟ್ಟಿಗಳ ಹೂವಿನ ಬಳ್ಳಿಗಳ ನಿರ್ವಹಣೆಗಾಗಿ ಪ್ರತಿ ತಿಂಗಳು ಪಾಲಿಕೆ ಹಣ ಪಾವತಿಸುತ್ತಿದೆ. ಇನ್ನೊಂದೆಡೆ ಸಾರ್ವಜನಿಕರು ಉದ್ಯಾನವದ ಪ್ರವೇಶಕ್ಕೆ ಶುಲ್ಕ ಭರಿಸುತ್ತಿದ್ದಾರೆ. ಆದರೆ, ಉದ್ಯಾನವನದಲ್ಲಿ
ಸಾರ್ವಜನಿಕರಿಗೆ ಯಾವುದೇ ಸೌಲಭ್ಯಗಳಿಲ್ಲ. ಮತ್ತು ಉತ್ತಮ ವಾತಾವರಣ ಇಲ್ಲದಂತಾಗಿದೆ.
ಪಾಲಿಕೆ ಅಧಿಕಾರಿಗಳು ಸಂಬಂಧಿಸಿದ ಗುತ್ತಿಗೆದಾರರಿಂದ ಸಮರ್ಪಕ ಸೇವೆ ಪಡೆಯುವಲ್ಲಿ ಆಸಕ್ತಿ ತೋರಿಸದಿರುವುದು ಸರಿಯಲ್ಲ. ಆದ್ದರಿಂದ ಅಧಿಕಾರಿಗಳು ಉದ್ಯಾನವನದ ಸೌಂದರ್ಯೀಕರಣಕ್ಕೆ ತುರ್ತಾಗಿ 25 ಲಕ್ಷ ರೂಪಾಯಿಗಳ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದರೆ. 3 ದಿನಗಳಲ್ಲಿ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಉದ್ಯಾನವನದಲ್ಲಿ
ಮೇಲ್ವಿಚಾರಣೆ ಅಧಿಕಾರಿಗಳ ಮೊಬೈಲ್ ನಂಬರನ್ನು ಸಾರ್ವಜನಿಕರ ಸಂಪರ್ಕಕ್ಕೆ ಪ್ರಕಟಿಸುವಂತೆ ಸೂಚಿಸಿದ ಮೇಯರ ಅವರು, ಉದ್ಯಾವನದ ನಿರ್ವಹಣೆಯಲ್ಲಿ ಲೋಪ ಎಸಗಿರುವ ಗುತ್ತಿಗೆದಾರರಿಗೆ ಇಂದೇ ನೋಟೀಸು ನೀಡುವಂತೆ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದರು.
ಸರಕಾರದ 200 ಕೋ.ರೂ.ಗಳ ವಿಶೇಷ ಅನುದಾನದಡಿ ಉದ್ಯಾನವನದ ಸಮಗ್ರ ಸೌಂದರ್ಯೀಕರಣಕ್ಕೆ ಅಂದಾಜು 2 ಕೋಟಿ ರೂಪಾಯಿಗಳ ಅನುದಾನ ಪಡೆಯಲು ಪಾಲಿಕೆಯಿಂದ ಪ್ರಯತ್ನ ಮಾಡಲಾಗುತ್ತಿದೆ. ಅನುದಾನ ಸಿಗುವ ವಿಶ್ವಾಸವಿದೆ.ಅಲ್ಲದೇ ಹಲವು ಬುಲೆಟ್ ಟ್ರೇನ್ ಇನ್ನಿತರ ಆಕರ್ಷಕ ಮಾದರಿಗಳನ್ನು ಉದ್ಯಾನವನದಲ್ಲಿ ಅಳವಡಿಸುವ ಸಂಬಂಧ ಚಿಂತನೆ ನಡೆದಿದೆ. ಸರ್ವವಿಧದಲ್ಲಿಯೂ ಅಚ್ಚುಕಟ್ಟಾದ ಉದ್ಯಾನವನ ರೂಪಿಸಿ ಸಾರ್ವಜನಿಕರ ಅನುಕೂಲಕ್ಕೆ ನೀಡಲಾಗುವುದು ಎಂದರು.
ಚೆನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ :
ಉದ್ಯಾನವನದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿ ಪ್ರತಿಷ್ಠಾಪಿಸಲು ಪಾಲಿಕೆಯಲ್ಲಿ ಈಗಾಗಲೇ ಠರಾವು ಪಾಸು ಮಾಡಲಾಗಿದೆ. ಈ ಕುರಿತಂತೆ ತಮ್ಮ ಅಧ್ಯಕ್ಷತೆಯಲ್ಲಿ ಸಮಿತಿ ಕೂಡ ರಚನೆಯಾಗಿದ್ದು, ಇದಕ್ಕಾಗಿ ಇಂದು ಸಮಿತಿ ಸದಸ್ಯರರೊಂದಿಗೆ ಸ್ಥಳ ಪರೀಶೀಲನೆ ಕೂಡ ಮಾಡಿದ್ದೇವೆ. ಸೂಕ್ತ ಸ್ಥಳ ನಿರ್ಧರಿಸಿ
ಅಂತಿಮಗೊಳಿಸಲಾಗುವುದು ಎಂದ ಅವರು, ಮೂರ್ತಿ ಸ್ಥಾಪನೆಗೆ ಅಗತ್ಯವಿರುವ ಪೂರಕ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು.
ಪಾಲಿಕೆ ಸದಸ್ಯರಾದ ಮಂಜುನಾತ ಬಟ್ಟೆಣ್ಣವರ, ಶಂಭುಗೌಡ ಸಾಲಮನಿ, ವಲಯ ಅಧಿಕಾರಿಗಳಾದ ಗಿರೀಶ ತಳವಾರ, ಆರ್.ಎಂ.ಕುಲಕರ್ಣಿ, ಅಭಿವೃದ್ಧಿ ಅಧಿಕಾರಿ ದಶವಂತ, ತೋಟಗಾರಿಕಾ ವಿಭಾಗದ ನಿರೀಕ್ಷಕರಾದ ಪ್ರೀತಿ ವಾಡೇದ ಇನ್ನಿತರ ಅಧಿಕಾರಿಗಳು ಮಹಾಪೌರರ ಭೇಟಿ ಸಂದರ್ಭದಲ್ಲಿದ್ದರು.