ಮೈಸೂರು: ನಗರದ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್ನಲ್ಲಿ ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್ (ಎಸ್ಪಿವಿಜಿಎಂಸಿ), ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಸಹಯೋಗದಲ್ಲಿ ಆಯೋಜಿಸಿರುವ 63ನೇ ಪಾರಂಪರಿಕ ಸಂಗೀತೋತ್ಸವ ಆರಂಭಗೊಂಡಿತು.
ವಿದುಷಿ ಸೂರ್ಯಗಾಯತ್ರಿ, ಟ್ರಸ್ಟ್ ಅಧ್ಯಕ್ಷ ಜಗನ್ನಾಥ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಚಾಲನೆ ನೀಡಿದರು.
ಕಲಾವಿದರ ಮೂಲಕ ಸಂಗೀತ ಪರಂಪರೆಯನ್ನು ಹೊಸ ತಲೆಮಾರಿಗೆ ದಾಟಿಸುವ ಜವಾಬ್ದಾರಿಯನ್ನು ಆರು ದಶಕಗಳಿಂದ ಟ್ರಸ್ಟ್ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮಲ್ಲಿಕಾರ್ಜುನಸ್ವಾಮಿ ಹೇಳಿದರು.
ವ್ಯಕ್ತಿಯು ಕಲಾವಿದನಾಗಿ ರೂಪುಗೊಳ್ಳುವುದಕ್ಕೆ ಬಹಳ ವರ್ಷದ ಪರಿಶ್ರಮವಿರುತ್ತದೆ. ಕಲೆ ಒಲಿಯುವುದು ಸುಲಭವಲ್ಲ. ಅದು ತಪಸ್ಸಿನಂತೆ. ಅದು ಸಿದ್ಧಿಸಿದ ನಂತರ ಕಲಾವಿದನಷ್ಟೇ ಅಲ್ಲ, ಕಲೆ ಹಾಗೂ ಸಮಾಜವೂ ಬೆಳಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಮರವಾದ ಕಲೆಯ ಜೊತೆ ಬೆರೆತ ಕಲಾವಿದನ ಜೀವ ಮತ್ತು ಜೀವನ ಪಾವನವಾದದ್ದು. ಅದು ಸಮಾಜಕ್ಕೆ ಎಂದೂ ಹಾಗೂ ಎಲ್ಲಿಯೂ ಸಣ್ಣ ಸೂಜಿಮೊನೆಯಷ್ಟೂ ಕೆಡುಕು ಉಂಟು ಮಾಡುವುದಿಲ್ಲ. ಸೌಹಾರ್ದ ಹಾಗೂ ಜೀವಪ್ರೀತಿಯನ್ನು ಕಲಿಸುತ್ತದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





