ಅಳ್ಳಾವರ: ಭಾರಿ ಮಳೆಗೆ ಸುಮಾರು ಇಪ್ಪತ್ತು ಎಮ್ಮೆಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಅಳ್ಳಾವರ ತಾಲೂಕಿನ ಶಿವನಗರ ಗ್ರಾಮದಲ್ಲಿ ನಡೆದಿದೆ.
ಶಿವನಗರ ಗ್ರಾಮದ ಗೌಳಿಗರು ದನಗಳನ್ನ ಮೇಯಿಸಲು ಪ್ರತಿದಿನದಂತೆ ಕಾಡಿಗೆ ತೆರಳಿದ್ದರು.ಸಂಜೆ ಏಕಾಏಕಿ ಸುರಿದ ರಕ್ಕಸ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಪ್ರವಾಹದ ಭೀತಿ ಎದುರಾಗಿದೆ. ನೋಡ ನೋಡುತ್ತಿದ್ದಂತೆ ಹಳ್ಳದ ನೀರು ಸಾವಿನ ಕೂಪವಾಗಿ, ಗೌಳಿಗರ ಸುಮಾರು ಇಪ್ಪತ್ತು ಎಮ್ಮೆಗಳು ತೇಲಿಕೊಂಡು ಹೋಗಿ ಪ್ರಾಣ ಕಳೆದುಕೊಂಡಿವೆ.
ಸಿದ್ದು ಎಮಕರ ಎಂಬುವವರ ಮೂರು ಎಮ್ಮೆಗಳು, ಜಾನು ಶಿಂದೆ, ಬಮ್ಮು ಯಮಕರ ಎಂಬುವವರ ತಲಾ ಎರಡು ಎಮ್ಮೆಗಳ ಮೃತ ದೇಹ ಪತ್ತೆಯಾಗಿವೆ. ಉಳಿದ ಮೃತ ಎಮ್ಮೆಗಳಿಗಾಗಿ ಶೋಧಕಾರ್ಯ ನಡೆದಿದೆ.
ದನಗಳಿಂದಲೇ ಬದುಕು ಕಟ್ಟಿಕೊಂಡು, ಮೂರು ಹೊತ್ತಿನ ತುತ್ತು ಅನ್ನಕ್ಕಾಗಿ ಅವುಗಳನ್ನೇ ನಂಬಿಕೊಂಡ ಶಿವನಗರ ಗ್ರಾಮದ ಗೌಳಿಗರ ಬದುಕೀಗ ಅಕ್ಷರಶಃ ನಲುಗಿ ಹೋಗಿದೆ. ಬೆಲೆ ಬಾಳುವ ಎಮ್ಮೆಗಳನ್ನ ಕಳೆದುಕೊಂಡವರ ಗೋಳು ಹೇಳತೀರದಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

