ಕೊಪ್ಪಳ: ಲಿಂಗಾಯತ ಪಂಚಮಸಾಲಿ ಸಮುದಾಯ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದರೆ, ಕೆಲ ಶಾಸಕರಿಗೆ ಆಸೆ ಹಾಗೂ ಆಮಿಷ ತೋರಿಸಿ, ಇದರ ಬಗ್ಗೆ ಧ್ವನಿ ಎತ್ತದಂತೆ ಕೆಲವರು ಕುತಂತ್ರ ಮಾಡುತ್ತಿದ್ದಾರೆ ಎಂದು ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, ಹೋರಾಟದ ವೇಳೆ ಲಿಂಗಾಯತ ಪಂಚಮಸಾಲಿಗಳ ಮೇಲೆ ಹಲ್ಲೆ ಮಾಡಲಾಗಿದೆ.
ಹೀಗಾಗಿ ಸರ್ಕಾರ ಕೂಡಲೇ ಸಮಾಜದ ಕ್ಷಮೆ ಕೇಳಬೇಕು. ಹಲ್ಲೆ ಮಾಡಿದ ಪೊಲೀಸರನ್ನು ಅಮಾನತು ಮಾಡಬೇಕು. ಸಮಾಜದವರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣ ಕೈಬಿಡಬೇಕು ಎಂದು ಆಗ್ರಹಿಸಿದರು.
ಮೀಸಲಾತಿ ಹೋರಾಟದ ಬಗ್ಗೆ ರಾಜ್ಯ ಸರ್ಕಾರದ ಯಾವುದೇ ಜನಪ್ರತಿನಿಧಿಗಳು ಗಮನ ಹರಿಸಲಿಲ್ಲ. ಧರಣಿ ಸತ್ಯಾಗ್ರಹ ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಡಿ. 23ರಿಂದ ಮನೆಮನೆಗೆ ಭೇಟಿ ನೀಡುವ ಮೂಲಕ ಹೋರಾಟ ಆರಂಭಿಸಿ ಹಲ್ಲೆಗೊಳಗಾದವರ ಕುಟುಂಬಕ್ಕೆ ಧೈರ್ಯ ತುಂಬುತ್ತೇವೆ ಎಂದು ತಿಳಿಸಿದರು.
ಲಿಂಗಾಯತರ ಮೇಲೆ ರಾಜ್ಯದಲ್ಲಿ ಮೊದಲ ಬಾರಿಗೆ ಹಲ್ಲೆಯಾಗಿದೆ, ಹಲ್ಲೆ ಮಾಡಿದ ಕುಖ್ಯಾತಿಗೆ ಈ ಸರ್ಕಾರ ಪಾತ್ರವಾಗಿದೆ. ನಮಗೆ ನ್ಯಾಯ ಸಿಗುವ ತನಕ ಹೋರಾಟ ನಿಲ್ಲುವುದಿಲ್ಲ ನಮಗೆ ಯಾರು ನ್ಯಾಯ ನೀಡುತ್ತಾರೋ ಅವರಿಗೆ ಸಹಕಾರ ನೀಡುತ್ತೇವೆ. ನಮ್ಮ ಸಮಾಜದ ಶಾಸಕರು, ಸಚಿವರನ್ನು ಹೆದರಿಸಿದ್ದಾರೆ. ಆದರೂ ಇಬ್ಬರು ಶಾಸಕರು ನಮ್ಮ ಪರ ಗಟ್ಟಿಯಾಗಿ ಮಾತನಾಡಿದ್ದಾರೆ. ಕೆಲ ಶಾಸಕರಿಗೆ ಆಸೆ, ಆಮಿಷ ತೋರಿಸಿ ಮಾತನಾಡದಂತೆ ತಡೆದಿದ್ದಾರೆ. ಈಗ ನಮ್ಮ ಹೋರಾಟ ಕ್ರಾಂತಿ ಹೋರಾಟವಾಗಿದೆ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

