ತುಮಕೂರು: ದಿನದಿಂದ ದಿನಕ್ಕೆ ತೆಂಗಿನಕಾಯಿಗೆ ಬೇಡಿಕೆ ಹೆಚ್ಚುತ್ತಿದ್ದು, ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಮುಂದಿನ ಬೇಸಿಗೆ ಹೊತ್ತಿಗೆ ದರ ಮತ್ತಷ್ಟು ದುಬಾರಿಯಾಗಲಿದೆ ಎಂದು ವರ್ತಕರು ಹೇಳುತ್ತಾರೆ.
ತೆಂಗಿನಕಾಯಿಗಳ ಗಾತ್ರಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಬೆಲೆ ನಿಗದಿಯಾಗುತ್ತಿದೆ.
ಸಣ್ಣ ಗಾತ್ರದ ಕಾಯಿ ₹20-₹22ಕ್ಕೆ ಮಾರಾಟವಾಗುತ್ತಿದ್ದರೆ, ಮಧ್ಯಮ ಗಾತ್ರ ₹25, ದೊಡ್ಡ ಗಾತ್ರದ ಕಾಯಿಗೆ ₹30ರ ವರೆಗೂ ಬೆಲೆ ಸಿಗುತ್ತಿದೆ. ಸಂತೆಗಳಲ್ಲಿ ಕೆ.ಜಿ ಲೆಕ್ಕದಲ್ಲೂ ಖರೀದಿಸುತ್ತಿದ್ದು, ಕೆ.ಜಿ ₹57-₹60ರ ವರೆಗೂ ಏರಿಕೆಯಾಗಿದೆ.
ಜಿಲ್ಲೆಯಲ್ಲಿ 2.24 ಲಕ್ಷ ಹೆಕ್ಟೇರ್ನಲ್ಲಿ ತೆಂಗು ಬೆಳೆಯಲಾಗುತ್ತಿದೆ. ಬರ, ರೋಗಬಾಧೆ, ಹವಾಮಾನ ವೈಪರೀತ್ಯದಿಂದಾಗಿ ಇಳುವರಿ ಕಡಿಮೆಯಾಗಿದೆ.
2023ರಲ್ಲಿ ತೀವ್ರ ಬರದಿಂದ ರೈತರು ಮರಗಳನ್ನು ಉಳಿಸಿಕೊಳ್ಳುವುದೇ ಕಷ್ಟಕರವಾಗಿತ್ತು. ಕಳೆದ ವರ್ಷ ಉತ್ತಮ ಮಳೆಯಾಗಿದ್ದರೂ ಮರಗಳು ಇನ್ನೂ ಚೇತರಿಸಿಕೊಂಡಿಲ್ಲ. ಎಳನೀರಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಸಾಕಷ್ಟು ರೈತರು ಎಳನೀರು ಮಾರಾಟ ಮಾಡುತ್ತಿದ್ದಾರೆ. ತೆಂಗಿನ ಉಪ ಉತ್ಪನ್ನಗಳ ತಯಾರಿಕೆ ಮತ್ತು ಬಳಕೆಯೂ ಹೆಚ್ಚಾಗಿದೆ. ಇದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.
ಹಿಂದಿನ ವರ್ಷಗಳಲ್ಲಿ ಕೊಬ್ಬರಿ ಬೆಲೆ ಕ್ವಿಂಟಲ್ಗೆ ₹10 ಸಾವಿರಕ್ಕಿಂತ ಕಡಿಮೆ ಇತ್ತು. ಬೆಲೆ ಕುಸಿತದಿಂದ ಕಂಗಾಲಾದವರು ತೆಂಗಿನಮರಗಳ ಜಾಗದಲ್ಲಿ ಅಡಿಕೆ ಸಸಿಗಳನ್ನು ನೆಟ್ಟಿದ್ದಾರೆ. ಇಂತಹ ಹಲವು ಕಾರಣಗಳಿಂದ ತೆಂಗು ಉತ್ಪಾದನೆ ಕುಸಿಯುತ್ತಲೇ ಸಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ವ್ಯಾಪಾರಿಗಳು ಹೇಳುತ್ತಾರೆ.
ಪಶ್ಚಿಮ ಬಂಗಾಳ ಸೇರಿ ಉತ್ತರ ಭಾರತದಲ್ಲಿ ಉಂಡೆ ಕೊಬ್ಬರಿ ಬದಲಿಗೆ ಕಾಯಿ ಪೌಡರ್ ಬಳಕೆ ಹೆಚ್ಚಾಗಿದೆ. ತಮಿಳುನಾಡಿನಲ್ಲೂ ಉತ್ಪಾದನೆ ತಗ್ಗಿದ್ದು, ಆ ರಾಜ್ಯದ ಕಾಯಿಯು ಸಂಕ್ರಾಂತಿ ನಂತರ ಮಾರುಕಟ್ಟೆಗೆ ಬರಲಿದೆ. ಇದರಿಂದಾಗಿ ಜಿಲ್ಲೆಯ ಕಾಯಿಗೆ ಬೇಡಿಕೆ ಬಂದಿದೆ ಎಂದು ವಿವರಿಸುತ್ತಾರೆ.
ವೆಂಕಟೇಶ್, ರೈತ, ಬಾಗೂರು, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆಕಳೆದ ವರ್ಷ ತೆಂಗಿನ ಮರಗಳು ಚೇತರಿಕೆ ಕಾಣದಷ್ಟು ಬಿಸಿಲು ಕಾಡಿತ್ತು. ಇದನ್ನು ನೋಡಲಾಗದೆ ಹಲವು ರೈತರು ಮರಗಳನ್ನು ಕಡಿದು ಹಾಕಿ ಅಡಿಕೆ ಸಸಿ ನೆಟ್ಟಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

