ಗಂಗಾವತಿ: ಮೇಲಧಿಕಾರಿಗಳ ಕಿರುಕುಳದಿಂದ ಮನನೊಂದು ಸರ್ಕಾರಿ ನೌಕರರೊಬ್ಬರು ತುಂಗಭದ್ರಾ ಎಡದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗಂಗಾವತಿ ಬಿಇಒ ಕಚೇರಿಯಲ್ಲಿ ಅಧೀಕ್ಷಕರಾಗಿದ್ದ ವಿಕಲಚೇತನ ನೌಕರ ಮಂಜುನಾಥ ನಾಪತ್ತೆಯಾಗಿದ್ದು, ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಆರಾಳ ಗ್ರಾಮದ ಸಮೀಪ ಕಾಲುವೆ ಬಳಿ ಮಂಜುನಾಥ ಅವರ ತ್ರಿಚಕ್ರ ವಾಹನ ಹಾಗೂ ಪಾದರಕ್ಷೆಗಳು ಪತ್ತೆಯಾಗಿವೆ. ಡೆತ್ನೋಟ್ನಲ್ಲಿ ಬಿಇಒ ನಟೇಶ್ ಎಚ್.ಬಿ., ಸುಪರಿಂಟೆಂಡೆಂಟ್ ಶಿವಪ್ರಸಾದ್ ಸ್ವಾಮಿ ಹಾಗೂ ಅಧೀಕ್ಷಕಿ ರೇಣುಕಾ ವೈ.ಗೌಡರ್ ಅವರ ಹೆಸರು ಉಲ್ಲೇಖಿಸಿ, ಅವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ ಎನ್ನಲಾಗಿದೆ. ಮಂಜುನಾಥ ಅವರಿಗಾಗಿ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾಲುವೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

