ತುಮಕೂರು: ಸುಮಾರು ಒಂದು ತಿಂಗಳ ಹಿಂದೆ ಚಿಕ್ಕನಾಯಕನಹಳ್ಳಿ ತಾಲೂಕಿನ ಅಶ್ರಿಹಾಳ್ ಗ್ರಾಮದ ಹೊರವಲಯದಲ್ಲಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಮಹಿಳೆಯ ಶವದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಘಟನಾ ಸ್ಥಳದಲ್ಲಿ ಸಿಕ್ಕಿದ್ದ ಮನೆಯ ಕೀಲಿಕೈಯೇ ಮೃತಳ ಗುರುತು ಪತ್ತೆಹಚ್ಚಲು ಪ್ರಮುಖ ಸುಳಿವಾಗಿದೆ. ಮೃತಳನ್ನು ಗುಬ್ಬಿ ತಾಲೂಕಿನ ಚೆಂಗಾವಿ ಗ್ರಾಮದ ಲಕ್ಷ್ಮಿದೇವಮ್ಮ ಎಂದು ಗುರುತಿಸಲಾಗಿದೆ. ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ನಾಗರಾಜ್ ಎಂಬಾತ ಹಣಕಾಸಿನ ವಿಚಾರದ ಜಗಳದಿಂದ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಸ್ನೇಹಿತನ ನೆರವಿನಿಂದ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಲೆಗೆ ಹೊಡೆದು ಕೊಲೆ ಮಾಡಿ, ಬಳಿಕ ಪೆಟ್ರೋಲ್ ಸುರಿದು ಶವಕ್ಕೆ ಬೆಂಕಿ ಹಚ್ಚಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಕಾಣೆಯಾಗಿದ್ದ ಲಕ್ಷ್ಮಿದೇವಮ್ಮನ ಮನೆಯ ಬೀಗಕ್ಕೆ ಘಟನಾ ಸ್ಥಳದಲ್ಲಿ ಸಿಕ್ಕ ಕೀಲಿಕೈ ಹೊಂದಿಕೆಯಾಗಿದ್ದರಿಂದ ಪೊಲೀಸರು ಪ್ರಕರಣದ ದಿಕ್ಕು ಪತ್ತೆಹಚ್ಚಿದರು. ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ನಾಗರಾಜ್ ಹಾಗೂ ಆತನಿಗೆ ಸಹಕರಿಸಿದ ಸ್ನೇಹಿತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
