ಚಿಕನ್ ಪೀಸ್ಗಾಗಿ ಗೆಳೆಯನ ಕಗ್ಗೊಲೆ! ಎಣ್ಣೆ ಏಟಿನಲ್ಲಿ ಎದೆಗೆ ಚಾಕು… ಕೊಲೆ ಮುಚ್ಚಲು ಕಟ್ಟುಕಥೆ ಕಟ್ಟಿದ ಆರೋಪಿ ಅರೆಸ್ಟ್!
ಬೆಳಗಾವಿ: ಭಾನುವಾರದ ರಜೆಯ ಮಜಾ ಕಳೆಯಲು ಗೆಳೆಯರು ಸೇರಿ ಮಾಡಿದ್ದ ಮದ್ಯದ ಪಾರ್ಟಿ ಕೊನೆಗೆ ರಕ್ತದೋಕುಳಿಯಾಗಿ ಮಾರ್ಪಟ್ಟಿದೆ. ಕೇವಲ ಚಿಕನ್ ಪೀಸ್ ವಿಚಾರಕ್ಕೆ ಶುರುವಾದ ಜಗಳ, ಗೆಳೆಯನೊಬ್ಬನ ಪ್ರಾಣವನ್ನೇ ಬಲಿ ಪಡೆದಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನಡೆದಿದೆ….
ಉತ್ತರ ಪ್ರದೇಶ ಮೂಲದ ಸೀತಾರಾಮ್ ಚಂದ್ರದೇವ್ ಕೊಲೆಯಾದ ಕಾರ್ಮಿಕ. ಘಟಪ್ರಭಾ ಸಮೀಪದ ಸ್ಟೀಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸೀತಾರಾಮ್, ಆರೋಪಿ ಅರುಣ್ಕುಮಾರ್ ಬಲಿಷ್ತಾರ್ ಚವಾಣ್ ಜೊತೆ ಒಂದೇ ಶೆಡ್ನಲ್ಲಿ ವಾಸವಾಗಿದ್ದ….
ಚಿಕನ್ ಪೀಸ್ನಿಂದ ಶುರುವಾಯ್ತು ಕಿರಿಕ್!

ಭಾನುವಾರ ರಜೆ ಹಿನ್ನೆಲೆಯಲ್ಲಿ ಇಬ್ಬರೂ ಸೇರಿ ಮದ್ಯದ ಪಾರ್ಟಿ ಮಾಡಿಕೊಂಡಿದ್ದರು. ಚಿಕನ್ ಅಡುಗೆ ಮಾಡಿಕೊಂಡು ಕುಳಿತು ಊಟ ಮಾಡುತ್ತಿದ್ದ ವೇಳೆ, “ಇಷ್ಟೊಂದು ಚಿಕನ್ ನೀನೊಬ್ಬನೇ ತಿಂದ್ಯಾ?” ಎಂಬ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ….
ಮದ್ಯದ ನಶೆಯಲ್ಲಿದ್ದ ಅರುಣ್ಗೆ ಜಗಳ ತಾರಕಕ್ಕೇರಿದೆ. ಕೋಪದ ಕೈಗೆ ಬುದ್ಧಿ ಕೊಟ್ಟು, ಅಲ್ಲೇ ಇದ್ದ ಚಾಕುವಿನಿಂದ ಸೀತಾರಾಮ್ನ ಎದೆಗೆ ಇರಿದಿದ್ದಾನೆ….
ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡ ಸೀತಾರಾಮ್ ರಕ್ತದ ಮಡುವಿನಲ್ಲಿ ಕುಸಿದುಬಿದ್ದಿದ್ದು, ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ….
ಕೊಲೆ ಮಾಡಿ ಕಥೆ ಕಟ್ಟಿದ ಆರೋಪಿ!
ಗೆಳೆಯ ಕಣ್ಣೆದುರೇ ಕುಸಿದುಬಿದ್ದಿದ್ದನ್ನು ಕಂಡು ಆರೋಪಿ ಅರುಣ್ ಬೆಚ್ಚಿಬಿದ್ದಿದ್ದಾನೆ. ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಹೊಸ ಕಥೆಯನ್ನೇ ಕಟ್ಟಿದ್ದಾನೆ….
ಗಾಯಗೊಂಡ ಸೀತಾರಾಮ್ನನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದ ಅರುಣ್, ವೆಲ್ಡಿಂಗ್ ಕೆಲಸ ಮಾಡುವಾಗ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದಾನೆ ಎಂದು ವೈದ್ಯರಿಗೆ ಹೇಳಿದ್ದಾನೆ….
ಆದರೆ ಸೀತಾರಾಮ್ನ ದೇಹದಲ್ಲಿದ್ದ ಗಾಯವನ್ನು ಪರಿಶೀಲಿಸಿದ ವೈದ್ಯರಿಗೆ ಅನುಮಾನ ಮೂಡಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ….
ವೈದ್ಯರ ಅನುಮಾನ… ಪೊಲೀಸರ ವಿಚಾರಣೆ… ಬಯಲಾಯ್ತು ಕೊಲೆ ರಹಸ್ಯ!
ಮಾಹಿತಿ ಪಡೆದ ಘಟಪ್ರಭಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅರುಣ್ನನ್ನು ವಿಚಾರಣೆಗೊಳಪಡಿಸಿದಾಗ, ಪೊಲೀಸರ ಪ್ರಶ್ನೆಗಳಿಗೆ ತಡಕಾಡಿದ ಆರೋಪಿ ಕೊನೆಗೆ ಸತ್ಯ ಬಾಯ್ಬಿಟ್ಟಿದ್ದಾನೆ….
ಚಿಕನ್ ಪೀಸ್ ವಿಚಾರಕ್ಕೆ ಜಗಳವಾಗಿ, ಮದ್ಯದ ನಶೆಯಲ್ಲಿ ಚಾಕುವಿನಿಂದ ಸೀತಾರಾಮ್ಗೆ ಇರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ….
ಚಾಕು ಜಪ್ತಿ… ಆರೋಪಿ ಬಂಧನ!
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕೊಲೆಗೆ ಬಳಸಿದ್ದ ಚಾಕುವನ್ನು ಜಪ್ತಿ ಮಾಡಿ ಆರೋಪಿ ಅರುಣ್ಕುಮಾರ್ನನ್ನು ಬಂಧಿಸಿದ್ದಾರೆ….
ಕೆಲವೇ ಕೋಳಿ ತುಂಡುಗಳಿಗಾಗಿ ಶುರುವಾದ ಜಗಳ… ಗೆಳೆಯನ ಜೀವವನ್ನೇ ಕಸಿದುಕೊಂಡಿದೆ….
ಒಂದು ಕ್ಷಣದ ಕೋಪ, ಮದ್ಯದ ನಶೆ, ಕೈಯಲ್ಲಿದ್ದ ಚಾಕು—ಇವೆಲ್ಲ ಸೇರಿ ಒಂದು ಜೀವವನ್ನೇ ಅಂತ್ಯಗೊಳಿಸಿದೆ. ಇದೀಗ ಚಿಕನ್ ಪೀಸ್ಗಾಗಿ ನಡೆದ ಈ ಕಗ್ಗೊಲೆ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಆಘಾತ ಮೂಡಿಸಿದೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

