
ಬೆಂಗಳೂರು : ಸಚಿವ ಎಸ್ ಟಿ ಸೋಮಶೇಖರ್ ಅವರ ಆಪ್ತ ಸಹಾಯಕ ದಿನೇಶ್ ಗೂಳಿಗೌಡ ಅವರಿಗೆ ಮಂಡ್ಯದಿಂದ ವಿಧಾನಪರಿಷತ್ತಿಗೆ ಟಿಕೆಟ್ ನೀಡಲು ಹೊರಟಿರುವ ಕಾಂಗ್ರೆಸ್ ನಡೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ. ಕಾಂಗ್ರೆಸ್ ಬಿಜೆಪಿಯ ಸಿ ಟೀಂ ಎಂಬುದನ್ನು ಕಾಂಗ್ರೆಸ್ ನಾಯಕರೇ ಹೇಳಬೇಕು ಎಂದರು.
ಪಕ್ಷದ ಕಚೇರಿ ಜೆ ಪಿ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಎಸ್.ಟಿ. ಸೋಮಶೇಖರ್ ಆಪ್ತ ಸಹಾಯಕರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ನಮ್ಮ ಸರ್ಕಾರ ಇದ್ದಾಗ ಡಿಸಿಎಂ ಆಗಿದ್ದ ಪರಮೇಶ್ವರ್ ಜೊತೆಗೆ ದಿನೇಶ್ ಗೂಳಿಗೌಡ ಇದ್ದರು.
ಸರ್ಕಾರ ಪತನದ ನಂತರ ಸಚಿವ ಸೋಮಶೇಖರ್ ಜೊತೆಗೆ ಹೋದರು. ಅವರು ಅಲ್ಲಿಂದ ವಾಪಸ್ ಬಂದು ಮಂಡ್ಯದಿಂದ ಅಭ್ಯರ್ಥಿ ಆಗುತ್ತಿದ್ದಾರೆ. ಹಾಗಾದರೆ, ಸೋಮಶೇಖರ್ ಜೊತೆಗೆ ಕಳುಹಿಸಿದವರು ಯಾರು?, ಅಲ್ಲಿಗೆ ಯಾವ ಕಾರಣಕ್ಕೆ ಕಳುಹಿಸಿದ್ದಾರೆ ಎಂದು ಪ್ರಶ್ನಿಸಿದರು.
ಬಿಜೆಪಿಯಿಂದ ಕೆಲವರು ವಾಪಸ್ ಬರುತ್ತಾರೆಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ಇದು ಅಚ್ಚರಿ ಪಡುವ ವಿಚಾರ ಏನೂ ಇಲ್ಲ. ಮುಂದಿನ ದಿನಗಳಲ್ಲಿ ಬಹುತೇಕರು ವಾಪಸ್ ಬರಬಹುದು ಎಂದು ಹೇಳಿದರು.
ಸೋಮವಾರ ಪಟ್ಟಿ ಬಿಡುಗಡೆ :
ವಿಧಾನಪರಿಷತ್ತಿಗೆ 6 ರಿಂದ 8 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಸೋಮವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಕಾಂಗ್ರೆಸ್, ಬಿಜೆಪಿ ಅಸಮಾಧಾನಿತರಿಗೆ ಕಾದು ಕುಳಿತ್ತಿಲ್ಲ. ಈಗ ನಿರ್ಧಾರ ಮಾಡಿರುವ ಕ್ಷೇತ್ರಗಳಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

