ಕಠ್ಮಂಡು: ಭಾರೀ ಮಳೆ ಹಿನ್ನೆಲೆಯಲ್ಲಿ ಪಶ್ಚಿಮ ನೇಪಾಳದಲ್ಲಿ ಭೂಕುಸಿತ ಉಂಟಾಗಿದ್ದು, ಘಟನೆಯಲ್ಲಿ 14 ಜನ ಸಾವನ್ನಪ್ಪಿದ್ದಾರೆ. 7 ಮಂದಿಗೆ ಗಾಯಗಳಾಗಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳದ ರಾಜಧಾನಿ ಕಠ್ಮಂಡುವಿನ ಪಶ್ಚಿಮಕ್ಕೆ ಸುಮಾರು 450 ಕಿ.ಮೀ ದೂರದಲ್ಲಿರುವ ಅಚ್ಚಾಮ್ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದ್ದು, ಘಟನೆಯಲ್ಲಿ ಹಲವಾರು ಮನೆಗಳು ಮಣ್ಣಿನಡಿ ಹೂತುಹೋಗಿವೆ ಎನ್ನಲಾಗಿದೆ.
ಅವಶೇಷಗಳಿಂದ ಮೃತದೇಹ ಹಾಗೂ ಗಾಯಾಳುಗಳನ್ನು ಹೊರ ತೆಗೆಯಲಾಗುತ್ತಿದ್ದು ಮೃತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನಾಪತ್ತೆಯಾಗಿರುವವರ ಪತ್ತೆಗೆ ರಕ್ಷಣಾ ಸಿಬ್ಬಂದಿ ಹುಡುಕಾಟ ಮುಂದುವರಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.
ಬೆಟ್ಟ ಪ್ರದೇಶವಾಗಿರುವ ನೇಪಾಳದಲ್ಲಿ ಆಗಾಗ ಭೂಕುಸಿತಗಳು ಉಂಟಾಗುತ್ತಲೇ ಇರುತ್ತವೆ. ಇತ್ತೀಚೆಗೆ ಮಳೆ ಮತ್ತಷ್ಟು ಹೆಚ್ಚಿದ್ದು ಜೂನ್ ಇಂದ ಸೆಪ್ಟೆಂಬರ್ ವರೆಗೆ ಭೂಕುಸಿತಗಳು ಹೆಚ್ಚಾಗಿ ಉಂಟಾಗುತ್ತವೆ. ಅಂಕಿ ಅಂಶಗಳ ಪ್ರಕಾರ ಈ ವರ್ಷ ಪ್ರವಾಹ ಹಾಗೂ ಭೂಕುಸಿತಗಳಿಂದಾಗಿ ನೇಪಾಳದಲ್ಲಿ 46 ಜನರು ಸಾವನ್ನಪ್ಪಿದ್ದು, 12 ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

