ಬಾಗಲಕೋಟೆ: ದೇಶದ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಚುನಾವಣೆ ತಂತ್ರಗಾರಿಕೆ ನಡೆಯುತ್ತವೆ. ಎಲ್ಲಾ ಕಡೆಯೂ ಗುಜರಾತ್ ಮಾದರಿ ಅನ್ವಯಿಸಲು ಆಗಲ್ಲ. ಕರ್ನಾಟಕದಲ್ಲೂ ಅದೇ ಮಾದರಿ ಅನ್ವಯಿಸುತ್ತೇವೆಂದು ಮೋದಿ ಆಗಲಿ ಅಥವಾ ಅಮಿತ್ ಶಾ ಅವರಾಗಲಿ ಎಲ್ಲೂ ಹೇಳಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಹಂತದಲ್ಲೂ ಒಂದೊಂದು ಪ್ರಯೋಗ ನಡೆಯುತ್ತವೆ. ಗುಜರಾತ್ನಲ್ಲಿ ಸ್ಥಳೀಯ ವ್ಯವಸ್ಥೆ ಹಿನ್ನೆಲೆಯಲ್ಲಿ ಅಮಿತ್ ಶಾ ಮತ್ತು ಮೋದಿ ಅವರು ಎಲ್ಲವನ್ನೂ ತಿಳಿದುಕೊಂಡು ಚುನಾವಣೆ ನಡೆಸುತ್ತಾರೆ. ಬೇರೆ ಬೇರೆ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಸರ್ವೇ ಮಾಡುತ್ತಾರೆ. ಯಾರಿಗೆ ಗೆಲ್ಲುವ ಅವಕಾಶ ಇದೆಯೋ ಅಂತವರಿಗೆ ಸ್ವಾಭಾವಿಕವಾಗಿ ಟಿಕೆಟ್ ಕೊಡುವ ವ್ಯವಸ್ಥೆ ಇದೆ. ಅದು ಕೇವಲ ಕರ್ನಾಟಕ ಅಷ್ಟೇ ಅಲ್ಲ, ಎಲ್ಲ ಕಡೆಯೂ ಅನ್ವಯಿಸುತ್ತದೆ.
ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ನಡೆಯಲ್ಲ. ಏಪ್ರಿಲ್-ಮೇನಲ್ಲಿ ಚುನಾವಣೆ ನಡೆಯಲಿದೆ. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳು ಮತ್ತು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಮಾಜಿ ಸಚಿವ ಜನಾರ್ದನ ರೆಡ್ಡಿ ಪುನಃ ರಾಜಕೀಯಕ್ಕೆ ಬರುವುದು ಅವರಿಗೆ ಬಿಟ್ಟಿದ್ದು. ಅವರು ಬಿಜೆಪಿ ಅಭಿಮಾನಿ. ಆ ಕುರಿತು ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

