ಮೈಸೂರು, ನವೆಂಬರ್, 07: ಜಿಲ್ಲೆಯ ಕೆ.ಆರ್.ನಗರ ತಾಲೂಕು ವ್ಯಾಪ್ತಿಯಲ್ಲಿರುವ ಚುಂಚನಕಟ್ಟೆಯು ಭಕ್ತರ ಇಷ್ಟಾರ್ಥ ನೆರವೇರಿಸುವ ಪವಿತ್ರ ಕ್ಷೇತ್ರವಾಗಿಯೂ, ಪ್ರಕೃತಿ ಪ್ರಿಯರ ಸೆಳೆಯುವ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದ್ದು, ಪ್ರತಿನಿತ್ಯವೂ ಇಲ್ಲಿಗೆ ನಾಸ್ತಿಕ, ಆಸ್ತಿಕರೆನ್ನದೆ ಎಲ್ಲರೂ ಭೇಟಿ ನೀಡುತ್ತಾರೆ. ಆದರೆ ಈ ಕ್ಷೇತ್ರಕ್ಕೆ ಬಂದವರು ಇಲ್ಲಿನ ಅವ್ಯವಸ್ಥೆ ನೋಡಿದ ಬಳಿಕ ಹಿಡಿಶಾಪ ಹಾಕಿಕೊಂಡು ಹಿಂತಿರುಗುವುದು ಮಾಮೂಲಿಯಾಗಿದೆ.
ದೈವಿಕ ತಾಣವಾಗಿಯೂ ಪ್ರವಾಸಿ ಸ್ಥಳವಾಗಿಯೂ ಗುರುತಿಸಿಕೊಂಡು ಪ್ರತಿನಿತ್ಯ ನೂರಾರು ಮಂದಿಯನ್ನು ಸೆಳೆಯುವ ಸ್ಥಳ ಅಭಿವೃದ್ಧಿ ಹೊಂದಿಲ್ಲದೆ ಹೋದರೂ ಸ್ವಚ್ಛವಾಗಿಯಾದರೂ ಇರಬೇಕಿತ್ತು. ಆದರೆ ಅದ್ಯಾವುದೂ ಇಲ್ಲದೆ ಗಬ್ಬೆದ್ದು ನಾರುತ್ತಿರುವುದು ಇಲ್ಲಿಗೆ ಭೇಟಿ ನೀಡಿದವರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಊರಿನ ಅಶುಚಿತ್ವ, ಮೂಲಸೌಕರ್ಯದ ಕೊರತೆ ನೋಡಿದಾಗ ಸ್ಥಳೀಯ ಆಡಳಿತ ಸಂಸ್ಥೆಗಳು ಏನು ಮಾಡುತ್ತಿವೆ? ಅಧಿಕಾರಿಗಳಿಗಾಗಲೀ, ಜನಪ್ರತಿನಿಧಿಗಳಿಗಾಗಲೀ ಇಲ್ಲಿನ ಸಮಸ್ಯೆ ಕಾಣಿಸುತ್ತಿಲ್ವ ಎಂಬ ಪ್ರಶ್ನೆಗಳು ಮೂಡುತ್ತಿವೆ.
ಚುಂಚನಕಟ್ಟೆ ಇತಿಹಾಸ, ಸ್ಥಳದ ಮಹತ್ವ ಮತ್ತು ನಿಸರ್ಗ ಸೌಂದರ್ಯದ ಬಗ್ಗೆ ಅರಿತು ಹತ್ತಿರದಿಂದ ನೋಡುವ ಖುಷಿಯಲ್ಲಿ ತೆರಳಿದರೆ ಅಲ್ಲಿನ ದುಸ್ಥಿತಿ ಕಣ್ಣಿಗೆ ರಾಚುತ್ತದೆ. ಇನ್ನು ಗ್ರಾಮದೊಳಗೆ ಹೋಗಿ ಜನರನ್ನು ಮಾತನಾಡಿಸಿದರೆ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಡುತ್ತಾರೆ. ಒಂದು ಪ್ರಸಿದ್ಧ ಸ್ಥಳಕ್ಕೆ ಇಂತಹ ಪರಿಸ್ಥಿತಿ ಬಂದಿರುವುದು ಬೇಸರದ ಸಂಗತಿಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





