ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಗರಡಿಮನೆ ತಾಲೀಮು ಅಂದರೇ ಅದೊಂದು ಗತ್ತು ಗಾಂಭಿರ್ಯ ಇರುತ್ತಿತ್ತು. ಧಾರವಾಡದ ಪೈಲ್ವಾನರು ಅಂದರೆ ಕೊಲ್ಹಾಪುರ, ಪುಣೆ, ಮುಂಬೈ.. ಹಿಂಗ ಎಲ್ಲಿಗೇ ಕುಸ್ತಿ ಆಡಲು ಹೋದರೂ ಗೆದ್ದು ಗರ್ವದಿಂದ ಬರುತ್ತಿದ್ದರು. ಕುಸ್ತಿಗಿ ರಾಜ್ಯದಾಗ ಧಾರವಾಡ ಜಿಲ್ಲಾ ಹೆಸರಾಗಿತ್ತು. ಆದರೆ ಈಗ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಗರಡಿ ಮನೆಗಳು ನಿರ್ವಹಣೆಯಿಂದ ಮರೆಯಾಗುತ್ತಿವೆ.

ಹೌದು.. ಗ್ರಾಮೀಣ ಪ್ರದೇಶದಲ್ಲಿ ಈ ಹಿಂದೆ ಮನೆಗೊಬ್ಬರು ಪೈಲ್ವಾನರು, ಓಣಿಗೊಂದು ಗರಡಿ ಮನೆ ಇತ್ತು. ಆದರೆ ಆಧುನಿಕತೆ ಪ್ರಭಾವದಿಂದ ಈ ಸಂಖ್ಯೆ ಕ್ರಮೇಣ ಕ್ಷೀಣಿಸಿದೆ. ಇದೀಗ ತಾಲ್ಲೂಕಿಗೆ ಒಂದಿಬ್ಬರು ಪೈಲ್ವಾನರ ಹೆಸರು ಕೇಳಿಬಂದರೆ, ಅಲ್ಲೊಂದು, ಇಲ್ಲೊಂದು ಗರಡಿಮನೆಗಳು ಮಾತ್ರ ಬಳಕೆಗೆ ಯೋಗ್ಯವಾಗಿವೆ. ಗರಡಿ ಮನೆಗಳಿಗೇ ಹೆಸರುವಾಸಿಯಾಗಿದ್ದ

ಹುಬ್ಬಳ್ಳಿಯ ಉಣಕಲ್ ಗ್ರಾಮದಲ್ಲಿ ಈ ಹಿಂದೆ 13 ಗರಡಿ ಮನೆಗಳಿದ್ದವು. ಆದರೆ, ಈ ಪೈಕಿ ಒಂದೇ ಉಳಿದಿದೆ. ಹೀಗೆ ಜಿಲ್ಲೆಯಲ್ಲಿನ 150ಕ್ಕೂ ಹೆಚ್ಚು ಗರಡಿ ಮನೆಗಳಲ್ಲಿ ಸದ್ಯ ತಾಲೀಮು ಸದ್ದು ನಿಂತುಹೋಗಿದೆ. 50 ರಿಂದ 60 ಗರಡಿಮನೆಗಳು ಮಾತ್ರ ಬಳಕೆಯಲ್ಲಿವೆ.ಹುಬ್ಬಳ್ಳಿಯ ಗೋಪನಕೊಪ್ಪ, ಹಳೇ ಹುಬ್ಬಳ್ಳಿ, ಉಣಕಲ್, ಗೋಕುಲ,

ಬೈರಿದೇವರಕೊಪ್ಪ, ಕಲ್ಲೂರು, ಗಾಮನಗಟ್ಟಿ, ಮಲ್ಲಿಗವಾಡ, ನವಲೂರು, ಗರಗ, ತಡಸಿನಕೊಪ್ಪ, ಕುಂದಗೋಳ, ಉಪ್ಪಿನಬೆಟಗೇರಿ ಹಾಗೂ ಜಿಲ್ಲೆಯ ಕುಸ್ತಿ ಪರಂಪರೆಯ ಕೊಂಡಿ ಎನಿಸಿರುವ ಕರ್ನಾಟಕ ವ್ಯಾಯಾಮ ಶಾಲೆ ಜ್ಯೋತಿ ತಾಲೀಮು, ಮಾರುತಿ ಕುಸ್ತಿ ವಿದ್ಯಾಲಯ, ಹೊಸ ಯಲ್ಲಾಪುರದಲ್ಲಿರುವ ಠಾಕೂರ್ ತಾಲೀಮು ಗರಡಿಮನೆಯಲ್ಲಿ ಮಾತ್ರ ನಿತ್ಯ ತಾಲೀಮು ನಡೆಯುತ್ತಿದೆ.

ಈ ಮುಂಚೆ ಗರಡಿಮನೆಗೆ ಉಸ್ತಾದ್, ಖಲೀಫ್, ಲೈಸೆನ್ಸ್ದಾರ ಇರುತ್ತಿದ್ದರು. ಇವರ ಉಸ್ತುವಾರಿಯಲ್ಲಿ ಗರಡಿಮನೆಯ ಚಟುವಟಿಕೆ, ಅಭ್ಯಾಸ ನಡೆಯುತ್ತಿದ್ದವು. ಆದರೆ, ಇಂದಿನ ಜನ ಗರಡಿ ಮನೆಗಳತ್ತ ಆಸಕ್ತಿ ತೋರದ ಕಾರಣ ಅವು ಪಾಳುಬಿದ್ದಿವೆ. ಮಳೆ ಬಂದರೆ ಸೋರುತ್ತವೆ. ಪಾಳುಬಿದ್ದ ಬಹುತೇಕ ಗರಡಿಮನೆಗಳಲ್ಲಿನ ವಸ್ತುಗಳೆಲ್ಲಾ ಕಳ್ಳರ ಪಾಲಾಗಿವೆ. ಶಿಸ್ತು, ಶ್ರದ್ಧೆಯ ಪಾಠ ಹೇಳಿಕೊಡುತ್ತಿದ್ದ ಗರಡಿ ಮನೆಗಳು, ರಾತ್ರಿಯಾದರೆ ಜೂಜಾಟ, ಕುಡುಕರ ಮೋಜು-ಮಸ್ತಿಯ ತಾಣ ಗಳಾಗಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

