ರಾಯಚೂರು: ಕೃಷ್ಣಾ ನದಿ ಮೂಲಕ ತಾಲ್ಲೂಕಿನ ಡಿ.ರಾಂಪುರ ಕೆರೆ ಸೇರಿಕೊಂಡಿದ್ದ ಭಾರೀ ಗಾತ್ರದ ಮೊಸಳೆಯನ್ನು ಗ್ರಾಮಸ್ಥರೇ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಗ್ರಾಮದ ಕೆರೆಗೆ ನೀರು ಕುಡಿಯಲು ಹೋದ ಕುರಿಗಳನ್ನು, ಹಂದಿಗಳನ್ನು ಮೊಸಳೆ ತಿಂದು ಹಾಕುತ್ತಿತ್ತು.
ಇದನ್ನು ಗಮನಿಸಿದ್ದ ಗ್ರಾಮಸ್ಥರು ರಾಯಚೂರು ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮೂಲಕ ತಿಳಿಸಿದ್ದರು. ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಮನವಿಗೆ ಸ್ಪಂದಿಸಿರಲಿಲ್ಲ.
ಸಾಕು ಜಾನುವಾರುಗಳ ಮೇಲೆ ದಾಳಿ ನಡೆಸಿ ನೀರೊಳಗೆ ಎಳೆದೊಯ್ಯುತ್ತಿದ್ದ ಮೊಸಳೆ ಮನುಷ್ಯರ ಮೇಲೆ ದಾಳಿ ನಡೆಸಿದರೆ ಕಷ್ಟ ಎಂದು ಅರಿತ ಗ್ರಾಮದ ಯುವಕರು ಮೊಸಳೆ ಹಿಡಿಯಲು ಯೋಜನೆ ರೂಪಿಸಿದ್ದರು. ಎರಡು ದಿನ ಕೆರೆ ಬಳಿ ಯಾರೂ ಹೋಗದಂತೆ ಹಾಗೂ ಜಾನುವಾರುಗಳನ್ನು ತರದಂತೆ ಎಚ್ಚರಿಕೆ ನೀಡಿದ್ದರು. ಗುರುವಾರ ಕೆರೆಯಲ್ಲಿ ಮೀನಿನ ಬಲೆ ಹಾಕಿದಾಗ ಮೊಸಳೆ ಅದರೊಳಗೆ ಸಿಕ್ಕಿ ಬಿದ್ದಿದೆ.
ಬಳಿಕ ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ಬಂದು ಮೊಸಳೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಗ್ರಾಮದಿಂದ ಸ್ವಲ್ಪದಲ್ಲಿ ದೂರದಲ್ಲಿರುವ ಕೃಷ್ಣಾ ನದಿಗೆ ಬಿಟ್ಟಿದ್ದಾರೆ. ಕೆರೆಯಲ್ಲಿ ಇನ್ನೂ ಎರಡು ಮೊಸಳೆಗಳು ಇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಜನ ಹಾಗೂ ಜಾನುವಾರಗಳ ರಕ್ಷಣೆಗೆ ಉಳಿದ ಎರಡು ಮೊಸಳೆಗಳನ್ನಾದರೂ ಹಿಡಿದು ನದಿಗೆ ಬಿಡಬೇಕು ಎಂದು ಡಿ.ರಾಂಪುರ ಗ್ರಾಮಸ್ಥರು ಮನವಿ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

