ಯಾದಗಿರಿ: ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಪ್ರಾಗೈತಿಹಾಸಿಕ, ಐತಿಹಾಸಿಕ ಪ್ರವಾಸಿ ತಾಣಗಳಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಪ್ರವಾಸಿ ತಾಣಗಳಿಗೆ ಸೂಕ್ತ ಸೌಲಭ್ಯ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ.
ಕೃಷ್ಣಾ ಮತ್ತು ಭೀಮಾ ನದಿಗಳು ಜಿಲ್ಲೆಯಲ್ಲಿ ಹರಿಯುತ್ತಿವೆ. ಯಾದಗಿರಿ ತಾಲ್ಲೂಕಿನ ಹತ್ತಿಕುಣಿ, ಸೌದಗಾರ್ ಬಳಿ ಎರಡು ಚಿಕ್ಕ ಜಲಾಶಯಗಳಿವೆ. ನಾರಾಯಣಪುರದಲ್ಲಿ ದೊಡ್ಡ ಜಲಾಶಯವಿದೆ. ಕೋಟೆ ಸೇರಿದಂತೆ ಬೆಟ್ಟಗುಡ್ಡಗಳಿಂದ ಆವೃತ್ತವಾಗಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಆದರೆ, ಅವುಗಳನ್ನು ಜನರಿಗೆ ಪ್ರವಾಸಿ ತಾಣವಾಗಿ ರೂಪಿಸಿ ಅವುಗಳಿಂದ ಆದಾಯ ವೃದ್ಧಿಗೆ ಜಿಲ್ಲಾಡಳಿತ ಸೇರಿದಂತೆ ಸಂಬಂಧಿಸಿದವರ ನಿರ್ಲಕ್ಷ್ಯದಿಂದ ಪ್ರವಾಸಿ ತಾಣಗಳು ಬೆಳಕಿಗೆ ಬರುತ್ತಿಲ್ಲ.
ರಾಜ್ಯದ ಕೋಟೆಗಳಲ್ಲಿ ಅತಿ ದೊಡ್ಡದಾದ ಕೋಟೆಗಳಲ್ಲಿ ನಗರದ ಕೋಟೆಯೂ ಒಂದಾಗಿದೆ. ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಕೋಟೆಯು 850 ಮೀಟರ್ ಸುತ್ತಳತೆ, 500 ಮೀಟರ್ ಅಗಲ, 100 ಮೀಟರ್ ಎತ್ತರ ಪ್ರದೇಶವನ್ನು ಹೊಂದಿದೆ. ಕೋಟೆ ಸುತ್ತಮತ್ತಲಿನ ಪ್ರದೇಶದಲ್ಲಿ 7 ಅಗಸಿಗಳನ್ನು ನಿರ್ಮಿಸಿಕೊಳ್ಳಲಾಗಿತ್ತು. ಆದರೆ, ಈಗ ಕೋಟೆ ಅವನತಿ ಅಂಚಿಗೆ ತಲುಪಿದೆ. ಐದಾರು ವರ್ಷಗಳ ಹಿಂದೆ ₹4 ಕೋಟಿ ಹಣ ಬಿಡುಗಡೆಯಾದರೂ ಅರ್ಭಬರ್ಧ ಕೆಲಸ ಆಗಿದೆ. ಕ್ರಿಯಾ ಯೋಜನೆಗೆ ತಕ್ಕಂತೆ ಕಾಮಗಾರಿ ಆಗಿಲ್ಲ. ಇದರಿಂದ ಕೋಟೆ ನವೀಕರಣ ಸರಿಯಾಗಿ ಆಗಿಲ್ಲ. ಈಗ ಮತ್ತೆ ಅನುದಾನ ಮಂಜೂರಾಗಿದೆ.
ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬಸವಸಾಗರ ಜಲಾಶಯ ಅಥವಾ ನಾರಾಯಣಪುರ ಡ್ಯಾಂ ಲಕ್ಷಾಂತರ ರೈತರಿಗೆ ಜೀವ ನದಿ ಆಗಿದೆ. ಆದರೆ, ಉದ್ಯಾನ ನಿರ್ಮಿಸಿ ಅಲ್ಲಿ ಪ್ರವಾಸಿ ತಾಣವಾಗಿ ಮಾರ್ಪಡಿಸುವ ಕೆಲಸ ಇನ್ನೂ ಆರಂಭವಾಗಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

