ಲಿಂಗಸುಗೂರು: ತಾಲ್ಲೂಕಿನ ಯರಡೋಣದ ರೈತ ಮಹಿಳೆ ಜಮೀನದಲ್ಲಿ ಬೆಳೆದಿದ್ದ ಪಪ್ಪಾಯಿ, ದಾಳಿಂಬೆ ಬೆಳೆಗಳನ್ನು ಯಂತ್ರ ಸಹಾಯದಿಂದ ನಾಶಪಡಿಸಿ ದೌರ್ಜನ್ಯ ನಡೆಸಿದ ಅರಣ್ಯಾಧಿಕಾರಿಗಳ ದೌರ್ಜನ್ಯ ವಿರೋಧಿಸಿ ರಾಜ್ಯ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜೇವರ್ಗಿ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ಅಮರೇಶ್ವರ ಕ್ರಾಸ್ನಲ್ಲಿ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಮುಖಂಡರು, ಸುಪ್ರೀಂ ಕೋರ್ಟ್ ಮತ್ತು ಸರ್ಕಾರ ಆದೇಶ, ಸುತ್ತೋಲೆಗಳನ್ನು ಧಿಕ್ಕರಿಸಿ ರಾಜಕೀಯ ಪ್ರೇರಿತ ಒತ್ತುವರಿ ತೆರವಿಗೆ ದುಂಡಾ ವರ್ತನೆ ನಡೆಸಿರುವುದನ್ನು ಖಂಡಿಸಿದರು. ದೌರ್ಜನ್ಯ ನಡೆಸಿದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಸರ್ಕಾರದ ವಿರುದ್ಧ ಧಿಕ್ಕಾರ ಹಾಕಿದರು. ಒಂದು ಗಂಟೆಕಾಲ ನಡೆದ ಪ್ರತಿಭಟನೆ ನಂತರ ತೆರವುಗೊಳಿಸಿದ ಭೂಮಿಯಲ್ಲಿ ಉಳುಮೆ ಮಾಡುತ್ತೇವೆ ಎಂದು ಎತ್ತು, ಟ್ರ್ಯಾಕ್ಟರ್, ಜೆಸಿಬಿ ಸೇರಿದಂತೆ ಮಡಿಕೆ, ಕುಂಟೆ ಸಮೇತ ನಾಲ್ಕು ಕಿಲೊ ಮೀಟರ್ ಪಾದಯಾತ್ರೆ ಮೂಲಕ ತೆರಳಿ ನೂರಾರು ರೈತರು ಉಳಿಮೆ ಮಾಡಿದರು. ಉಳಿಮೆಗೆ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳ ಸರ್ಪಗಾವಲು ಬೇಧಿಸಿ ಜಯಕಾರಗಳೊಂದಿಗೆ ಉಳುಮೆ ನಡೆಸಲಾಯಿತು.
ದೌರ್ಜನ್ಯದಿಂದ ತೆರವುಗೊಳಿಸಿದ್ದ ಜಮೀನದಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ರೈತರು ಮತ್ತು ಅರಣ್ಯ ಸಿಬ್ಬಂದಿ ನಡುವೆ ಜಟಾಪಟಿಗಳು ನಡೆಯುತ್ತಲೆ ಬಂದವು. ನೂರಾರು ರೈತರ ಹಾರಾಟ, ಜಯಕಾರ, ಎತ್ತುಗಳ ಓಡಾಟ, ಟ್ರ್ಯಾಕ್ಟರ್, ಫೋಕ್ಲೈನ್ ಅರ್ಭಟ ತಡೆಯಲಾಗದೇ ಮೌನವಾಗಿದ್ದು ರೈತರ ಶಕ್ತಿಗೆ ಸಾಕ್ಷಿಯಾಗಿತ್ತು. ಇನ್ನೊಂದಡೆ ರೈತ ಮುಖಂಡರು, ಅಧಿಕಾರಿಗಳು ಸೌಹಾರ್ದಯುತ ಮಾತುಕತೆ ಸಮಸ್ಯೆಗೆ ತೆರೆ ಎಳೆಯುವಂತಾಯಿತು.
ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಹನುಮಂತಪ್ಪ ಕಾಕರಗಲ್ಲ ಮಾತನಾಡಿ, ಅರಣ್ಯಾಧಿಕಾರಿಗಳೆ ರೈತರು ಒತ್ತುವರಿ ಮಾಡಿದ್ದರು ಕೂಡ ನಾಡಿಗೆ ಅನ್ನ ನೀಡುತ್ತಾರೆ. ನಾಲ್ಕಾರು ಎಕರೆಗಳಿಂದ ಶ್ರೀಮಂತರಾಗಲು ಸಾಧ್ಯವಿಲ್ಲ. ಬನ್ನಿ ಜಿಲ್ಲೆಯಲ್ಲಿ ಶಾಸಕರು, ಸಂಸದರು, ಪ್ರತಿಷ್ಠಿತರು ನೂರಾರು ಎಕರೆ ಒತ್ತುವರಿ ಮಾಡಿಕೊಂಡು ಲೂಟಿ ನಡೆಸಿದ್ದಾರೆ. ಮೊದಲು ಅವರನ್ನು ತೆರವುಗೊಳಿಸಿ ಎಂದು ಸವಾಲು ಹಾಕಿದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ನಿಮ್ಮ ದಾಖಲೆ ನಾವು ಒಪ್ಪುವುದಿಲ್ಲ. ಪಹಣಿ, ಟೋಂಚ್, ಟಿಪ್ಪಣಿ ಜಂಟಿ ಸರ್ವೆ ವರದಿ ಹಿಡಿದು ರೈತರನ್ನು ಒಕ್ಕಲೆಬ್ಬಿಸಿ. ನಕ್ಷೆಯಲ್ಲಿ ಬಣ್ಣ ಬಳಿದು ಇದು ನಮ್ಮದು ಎಂದು ತೆವುಗೊಳಿಸಲು ಬಂದರೆ ಕ್ಷಮಿಸುವುದಿಲ್ಲ. ರೈತರ ರಕ್ಷಣೆ ಮಾಡಿ, ಪ್ರತಿಷ್ಠೀತರ ತೆರವಿಗೆ ಮುಂದಾಗಿ ರೈತರು ನಿಮಗೆ ಬೆಂಬಲ ನೀಡುತ್ತೇವೆ’ ಎಂದು ಅರಣ್ಯಾಧಿಕಾರಿಗಳಿಗೆ ಟಾಂಗ್ ನೀಡಿದರು.
ಈ ಜಮೀನು ಒಳಗೊಂಡಂತೆ ತಾಲ್ಲೂಕಿನಲ್ಲಿ ನಡೆದಿರುವ ಒತ್ತುವರಿ, ಅಕ್ರಮ ಸಕ್ರಮ ಪ್ರಕರಣಗಳ ಪಟ್ಟಿ ಮಾಡಿ ಜಂಟಿ ಸರ್ವೆ ವರದಿ ಸಮೇತ ತೆರವಿಗೆ ಮುಂದಾಗಿ ಅಲ್ಲಿಯ ತನಕ ಈ ಭೂಮಿ ಮಾಲಿಕರ ಮೇಲೆ ಯಾವುದೇ ದೌರ್ಜನ್ಯ ನಡೆಸಬಾರದು. ಅನಗತ್ಯ ಕಿರುಕುಳ ನಡೆಸಿದ್ದೆ ಆದಲ್ಲಿ ಹೋರಾಟದ ಸ್ವರೂಪ ಬೇರೆ ಆಗಿರುತ್ತದೆ. ರೈತರ ರಕ್ಷಣೆಗೆ ಮಾನವೀಯತೆ ತೋರಿಸಿ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





