ಬೆಂಗಳೂರು : ಕೇಂದ್ರ ಸರ್ಕಾರವು ಕೃಷಿ ವಲಯ ಸೇರಿದಂತೆ ರಾಜ್ಯದ ಇತರ ಕ್ಷೇತ್ರಕ್ಕೂ ಅನುದಾನವನ್ನು ಕಡಿತಗೊಳಿಸುವ ಮೂಲಕ ಮಲತಾಯಿ ಧೋರಣೆ ತಾಳಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ, ಅಮಿತ್ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಆಡಳಿತ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಬಗ್ಗೆ ಕೇಂದ್ರದಲ್ಲಿ ಇರುವ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ರಾಜ್ಯದ ಬಿಜೆಪಿ ಸಂಸದರು ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಕಿಡಿಕಾರಿದರು. ಕರ್ನಾಟಕದ ರೈತರ ಶ್ರೇಯೋಭಿವೃದ್ಧಿಗಾಗಿ ಒಂದು ಮಾತನ್ನೂ ಆಡದ ಕುಮಾರಸ್ವಾಮಿ, ರಾಜ್ಯದ ಸಂಸದರು ರೈತರಿಗೆ ಸಿಗಬೇಕಾದ ಅನುದಾನವನ್ನು ಕೇಳದೇ, ಕಾರ್ಪೊರೇಟ್ ವಲಯಗಳಿಗೆ ಸ್ನೇಹಪರರಾಗುತ್ತಿದ್ದಾರೆ ಎಂದು ದೂರಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಸೇರಿದಂತೆ ಬಡವರ ಪರ ಯೋಜನೆಗಳಿಗೆ ಕೇಂದ್ರ ಸರ್ಕಾರ ನಿಧಿ ಹಂಚಿಕೆ ನಿರ್ಬಂಧಿಸುತ್ತಿದೆ. ಕೇಂದ್ರದ ಪ್ರಾಯೋಜಿತ ಎಲ್ಲಾ ಯೋಜನೆಗಳಲ್ಲಿ, ಯಾವುದೇ ಹಿಂಜರಿಕೆಯಿಲ್ಲದೆ ಅನುದಾನ ಹಂಚಿಕೆಗೆ ಕಡಿವಾಣ ಹಾಕಲಾಗಿದೆ. ಪಿಎಂಎವೈ ಯೋಜನೆಯಡಿ ಶೇ.28ರಷ್ಟು ಅನುದಾನ ಕಡಿತಗೊಳಿಸಲಾಗಿದೆ.
ಮತ್ತೊಂದೆಡೆ, ನಬಾರ್ಡ್ ನಿಂದ ಅನುದಾನ ಕಡಿತ, ಅಲ್ಪಾವಧಿಯ ಸಹಕಾರಿ ಸಾಲ ರಚನೆಯ ಪರವಾಗಿ 2024-25 ವರ್ಷಕ್ಕೆ ರೂ.9.162 ಕೋಟಿ ಕೃಷಿ ಕಾರ್ಯಾಚರಣೆಗಳ ಮಿತಿಯನ್ನು ಮಂಜೂರು ಮಾಡಲು ರಾಜ್ಯ ಸರ್ಕಾರವು ನಬಾರ್ಡ್ಗೆ ವಿನಂತಿಸಿದೆ. ಆದರೆ ಈ ವರ್ಷ ಮಂಜೂರಾದ ಮಿತಿಯು ರೂ. 2,340 ಕೋಟಿಗಳಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.58ರಷ್ಟು ಕಡಿಮೆಯಾಗಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

