ಮಡಿಕೇರಿ: ಲಾರಿ ಮತ್ತು ಪಿಕ್ಅಪ್ ಸೇರಿದಂತೆ ಯಾವುದೇ ಬಗೆಯ ವಾಹನದಲ್ಲಿ ಎಂ-ಸ್ಯಾಂಡ್, ಜಲ್ಲಿಕಲ್ಲುಗಳನ್ನು ಸಾಗಾಣಿಕೆ ಮಾಡುವಾಗ ಕಡ್ಡಾಯವಾಗಿ ಟಾರ್ಪಲ್ನ್ನು ಮುಚ್ಚಿರಬೇಕು. ಇಲ್ಲದಿದ್ದರೆ, ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಎಚ್ಚರಿಕೆ ನೀಡಿದರು.
ಇಲ್ಲಿನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅವರು ಲಾರಿ ಚಾಲಕರು, ಮಾಲೀಕರ ಸಂಘದ ಅಧ್ಯಕ್ಷರು, ಸದಸ್ಯರು, ಟ್ಯಾಕ್ಸಿ ಇತರೆ ಸರಕು ಸಾಗಣೆ ವಾಹನ ಚಾಲಕರೊಂದಿಗೆ ನಡೆಸಿದ ಸಭೆಯಲ್ಲಿ ಈ ಎಚ್ಚರಿಕೆಯನ್ನು ರವಾನಿಸಿದರು.
ಒಂದು ವೇಳೆ ಟಾರ್ಪಲ್ ಮುಚ್ಚದೇ ತೆಗೆದುಕೊಂಡು ಹೋಗುವುದನ್ನು ಸಾರ್ವಜನಿಕರು ಫೋಟೊ ತೆಗೆದು ಕಳುಹಿಸಿದರೆ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮರದ ದಿಮ್ಮಿಗಳನ್ನು ಸಾಗಾಣಿಕೆ ಮಾಡುವ ವಾಹನಗಳಲ್ಲಿ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಭಾರ ಹಾಕಬಾರದು, ಅತಿ ವೇಗ ಮತ್ತು ಅಜಾಗರೂಕತೆಯಿಂದ ಯಾವುದೇ ಕಾರಣಕ್ಕೂ ವಾಹನಗಳನ್ನು ಚಾಲನೆ ಮಾಡಲೇಬಾರದು ಎಂದು ಸೂಚಿಸಿದರು.
ಎಲ್ಲ ಚಾಲಕರು ಹಾಗೂ ಸಾರ್ವಜನಿಕರೊಂದಿಗೆ ಪೊಲೀಸರು ಸಹ ಗೌರವದಿಂದ ಮಾತನಾಡಬೇಕು, ಸೌಜನ್ಯದಿಂದ ವರ್ತಿಸಬೇಕು ಎಂದೂ ಅವರು ಪೊಲೀಸರಿಗೆ ನಿರ್ದೇಶನ ನೀಡಿದರು.
ರಸ್ತೆಗಳಲ್ಲಿ ವಾಹನ ಸವಾರರು ಯಾವುದೇ ಬಗೆಯ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದೇ ಆದಲ್ಲಿ ಆ ಕುರಿತ ಮಾಹಿತಿ ನೀಡುವಂತೆಯೂ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ರಸ್ತೆಯಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದೂ ಅವರು ಕೋರಿದರು.
ಪೊಲೀಸ್ ನಿಯಂತ್ರಣ ಕಚೇರಿಯ ಮೊ: 9480804900 ದೂ: 08272228330 ಗೆ ಕರೆ ಮಾಡಿ ಮಾಹಿತಿ ನೀಡಿದರೆ ಮಾಹಿತಿ ನೀಡಿದವರ ಹೆಸರುಗಳನ್ನು, ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಅವರು ಭರವಸೆ ನೀಡಿದರು.
ಚಾಲಕರ ಕುಂದುಕೊರತೆಗಳನ್ನೂ ಆಲಿಸಿದ ಅವರು ಆ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ರಾಜ್, ಡಿವೈಎಸ್ಪಿ ರವಿ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





