ಕಟ್ಟಡ ಕಾಮಗಾರಿಯ ವಿಚಾರದಲ್ಲಿ ಉಂಟಾದ ಕಲಹದ ಹಿನ್ನೆಲೆಯಲ್ಲಿ ಸ್ನೇಹಿತನ ಮನೆಯಲ್ಲೇ ದರೋಡೆ ಮಾಡಿಸಿದ್ದ ಮೇಸ್ತ್ರಿ ಸೇರಿ ಮೂವರು ಆರೋಪಿಗಳನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಗುರುಪ್ರಸಾದ್, ಅರ್ಬಾಜ್ ಹಾಗೂ ಜಿಬ್ರಾನ್ ಬಂಧಿತರಾಗಿದ್ದು, ₹12 ಲಕ್ಷ ನಗದು, ₹24 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ವಾಹನಗಳು ಮತ್ತು ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ. ಮನೆ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತವಾದ ಕಾರಣಕ್ಕೆ ಕೋಪಗೊಂಡ ಮೇಸ್ತ್ರಿ ಗುರುಪ್ರಸಾದ್, ತನ್ನ ಸಹಚರರೊಂದಿಗೆ ದರೋಡೆ ಸಂಚು ರೂಪಿಸಿದ್ದಾನೆ ಎನ್ನಲಾಗಿದೆ. ಏಪ್ರಿಲ್ 18ರಂದು ರಾತ್ರಿ ಮಾಸ್ಕ್ ಧರಿಸಿ ಮನೆಗೆ ನುಗ್ಗಿದ ಆರೋಪಿಗಳು ಚಾಕು ತೋರಿಸಿ ಹಣ ಹಾಗೂ ಆಭರಣ ದೋಚಿ ಪರಾರಿಯಾಗಿದ್ದರು. ದರೋಡೆ ವೇಳೆ ಮನೆ ಮಾಲೀಕರು “ಎಲ್ಲವನ್ನೂ ತೆಗೆದುಕೊಂಡರೆ ನಾವು ಏನು ಮಾಡುವುದು?” ಎಂದು ಕೇಳಿದಾಗ, ಆರೋಪಿಗಳು ಕದ್ದ ಹಣದಲ್ಲೇ ₹50 ಸಾವಿರವನ್ನು ವಾಪಸ್ ನೀಡಿದ್ದರೆಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

