ಬೆಂಗಳೂರು: ಎಲೆಕ್ಟ್ರಿಕಲ್ ಅಂಗಡಿ ಮಾಲೀಕರ ಮನೆಗೆ ಕನ್ನ ಹಾಕಿದ್ದ ಅಂತರರಾಜ್ಯ ಕಳ್ಳರ ಗ್ಯಾಂಗ್ ಅನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು 7,000 ಕಿಲೋಮೀಟರ್ಗಳ ಬೆನ್ನಟ್ಟಿದ ಕಾರ್ಯಾಚರಣೆಯ ಬಳಿಕ ಬಂಧಿಸಿದ್ದಾರೆ. ರಾಜಸ್ಥಾನದ ಮೂವರು ಆರೋಪಿಗಳನ್ನು ಬಂಧಿಸಿ, 187 ಗ್ರಾಂ ಚಿನ್ನಾಭರಣ, 1.371 ಕೆಜಿ ಬೆಳ್ಳಿ ಹಾಗೂ ಬೈಕ್ ಸೇರಿ ₹33.5 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮುದ್ದಿನಪಾಳ್ಯದ ವ್ಯಾಪಾರಿ ರಾಕೇಶ್ ಕುಟುಂಬ ಸಮೇತ ಅಂಗಡಿಗೆ ತೆರಳಿದ್ದ ವೇಳೆ ಮನೆ ಬೀಗ ಮುರಿದು ಕಳ್ಳತನ ನಡೆದಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಹಾಗೂ ರಾಜಸ್ಥಾನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದರು. ಬಂಧಿತ ಕರಣ್ ರಾಮ್ ಅಲಿಯಾಸ್ ಕನ್ಯಾ ದೇವಸಿ, ಲಕ್ಷ ರಾಮ್ ಅಲಿಯಾಸ್ ಲಕ್ಕಿ ದೇವಾ ಹಾಗೂ ಗೋಪಾಲ್ ವಿರುದ್ಧ ಈ ಹಿಂದೆಯೂ ಮನೆಗಳ್ಳತನ ಪ್ರಕರಣಗಳಿದ್ದು, ಶ್ರೀಮಂತರ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

