ರಾಯಚೂರು: ಸಿರವಾರ ತಾಲ್ಲೂಕಿನ ಹೊಕ್ರಾಣಿಯಲ್ಲಿ ಅಶ್ವಿನಿ ತಿಮ್ಮಾರೆಡ್ಡಿ (22) ಎಂಬ ಯುವತಿಯನ್ನು ಕೊಲೆ ಮಾಡಲಾಗಿದ್ದು, ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರವಾರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬುಧವಾರ ಸಂಜೆ ಶೌಚಕ್ಕೆಂದು ಮನೆಯಿಂದ ಹೊರಗೆ ಹೋದ ಅಶ್ವಿನಿ ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಗುರುವಾರ ಬೆಳಿಗ್ಗೆ ಬಾವಿಯಲ್ಲಿ ನಗ್ನ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಗುಂಡ್ಯ ರಾಮಣ್ಣ, ಮಹಾಂತೇಶ ಹುಲಿಗೆಪ್ಪ, ವೀರೇಶ ರಾಜಪ್ಪ ಹಾಗೂ ಬಸವರಾಜ ಮಹಾದೇವ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಲಿಂಗಸುಗೂರು ತಾಲ್ಲೂಕಿನ ಕರಡಕಲ್ ಗ್ರಾಮದ ರಾಣಿ ತಿಪ್ಪಣ್ಣ ಬಜ್ಜಲೇರ (30) ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಕಟ್ಟಿಗೆ ತರಲು ಹೊಲಕ್ಕೆ ತೆರಳಿದ್ದ ರಾಣಿ, ಇಬ್ಬರು ಅಪರಿಚಿತರು ಮೊಬೈಲ್ ಕಸಿದುಕೊಳ್ಳುತ್ತಿದ್ದಾರೆ ಎಂದು ಪತಿಗೆ ಕರೆ ಮಾಡಿದ್ದಳು. ಸ್ಥಳಕ್ಕೆ ತೆರಳುವಷ್ಟರಲ್ಲಿ ಆಕೆ ಕಾಣೆಯಾಗಿದ್ದು, ಗುರುವಾರ ಜಾಲಿಬೆಂಚಿ ರಸ್ತೆಯಲ್ಲಿ ಮುಖವನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

