ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಕಬಿನಿ ಜಲಾಶಯ ಮಾತ್ರವಲ್ಲದೆ ತಾರಕ ಮತ್ತು ನುಗು ಎಂಬ ಇನ್ನೆರಡು ಜಲಾಶಯವಿದ್ದು, ಈ ಜಲಾಶಯಗಳು ಕಳೆದ ಐದು ವರ್ಷಗಳಿಂದ ಭರ್ತಿಯಾಗಿರಲಿಲ್ಲ.
ಆದರೆ ಈ ಬಾರಿ ಉತ್ತಮವಾಗಿ ಮಳೆಯಾಗಿರುವುದರಿಂದ ಇವೆರಡು ಜಲಾಶಯಗಳು ಭರ್ತಿಯಾಗುವೆ. ಭದ್ರತಾ ದೃಷ್ಠಿಯಿಂದ ಮೂರು ಅಡಿಗಳನ್ನು ಕಾದಿರಿಸಿಕೊಂಡು ನುಗು ಜಲಾಶಯದಿಂದ ನೀರು ಬಿಡಲಾಗಿದೆ. ಹೀಗಾಗಿ ನದಿಪಾತ್ರದ ಜನರು ಎಚ್ಚರವಾಗಿರುವಂತೆ ನದಿ ತಟದ ಜನತೆಗೆ ಸೂಚನೆ ನೀಡಲಾಗಿದೆ.
ಕಳೆದ ಕೆಲವು ವರ್ಷಗಳಿಂದ ನದಿಗಳಲ್ಲಿ ಪ್ರವಾಹವನ್ನೇ ನೋಡದ ಜನ ಈ ಬಾರಿ ಉಕ್ಕಿ ಹರಿಯುತ್ತಿರುವ ನದಿ ಮತ್ತು ಅದು ಮಾಡುತ್ತಿರುವ ಅನಾಹುತಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ನದಿ ಪಾತ್ರ, ಕೆರೆ ಕಟ್ಟೆಗಳ ಹಿನ್ನೀರು ಪ್ರದೇಶದಲ್ಲಿ ಮನೆ, ಜಮೀನು ಮಾಡಿದ್ದ ಮಂದಿ ಈಗ ಉಕ್ಕಿ ಬರುತ್ತಿರುವ ನೀರಿನಿಂದ ಕಂಗಾಲಾಗಿದ್ದಾರೆ.
ಜುಲೈನಲ್ಲಿಯೇ ಕರ್ನಾಟಕದ ಜಲಾಶಯಗಳು ಭರ್ತಿ
ಕೇರಳ ಮತ್ತು ಮೈಸೂರಿನ ಗಡಿಭಾಗಗಳಾದ ಹೆಚ್.ಡಿ.ಕೋಟೆ ನಾಗರಹೊಳೆ ವ್ಯಾಪ್ತಿಯಲ್ಲಿ ಭಾರೀ ಮಳೆಸುರಿದು ನದಿಗಳು ಉಕ್ಕಿ ಹರಿಯುತ್ತಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿರುವುದರಿಂದಾಗಿ ಸಾರತಿ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವುದು ತಾರಕ ಜಲಾಶಯದ ನೀರಿನ ಮಟ್ಟ ಹೆಚ್ಚಾಗಲು ಕಾರಣವಾಗಿದೆ.
ತಗ್ಗು ಪ್ರದೇಶದ ಜನರಿಗೆ ಭಯ
ಈಗ ಎಲ್ಲೆಡೆ ಮಳೆಯಾಗಿ ಜಲಾಶಯಗಳು ಭರ್ತಿಯಾಗುತ್ತಿದ್ದು ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿರುವ ಕಾರಣ ನದಿ ತಟದ ತಗ್ಗು ಪ್ರದೇಶಗಳು ಜಲಾವೃತವಾಗುತ್ತಿದ್ದು, ಪ್ರವಾಹ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಹೀಗಾಗಿ ಜನ ಜೀವನ ಅಸ್ತವ್ಯಸ್ತಗೊಂಡಿರುವುದಲ್ಲದೆ, ಜನರು ಭಯದಲ್ಲೇ ಕಾಲ ಕಳೆಯುವಂತಾಗಿದೆ. ಈಗಾಗಲೇ ಕಬಿನಿ ಜಲಾಶಯದಿಂದ ಸುಮಾರು 50ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿತ್ತು. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ತಾರಕ ಮತ್ತು ನುಗು ಜಲಾಶಯದಿಂದಲೂ ನದಿಗೆ ನೀರು ಹರಿಸಿದರೆ ಈ ವ್ಯಾಪ್ತಿಯ ರೈತರು ತೊಂದರೆ ಅನುಭವಿಸುವುದು ಅನಿವಾರ್ಯವಾಗಿದೆ.
ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಮೂರು ಜಲಾಶಯವಿದ್ದರೂ ಕಬಿನಿ ಜಲಾಶಯ ಮಾತ್ರ ಸಾಮಾನ್ಯವಾಗಿ ಭರ್ತಿಯಾಗುತ್ತಿತ್ತು. ಉಳಿದಂತೆ ನುಗು ಜಲಾಶಯ ಮತ್ತು ತಾರಕ ಜಲಾಶಯಗಳು ಭರ್ತಿಯಾಗಿರುವುದು ಅಪರೂಪ. ನುಗು ಜಲಾಶಯ 2009 ಮತ್ತು 2013ರಲ್ಲಿ ಭರ್ತಿಯಾಗಿತ್ತು. ಆದಾದ ಬಳಿಕ ಇದೀಗ ಭರ್ತಿಯಾಗಿದೆ. 110 ಅಡಿ ಸಾಮಥ್ರ್ಯದ ಜಲಾಶಯದಲ್ಲಿ ಸದ್ಯ 107 ಅಡಿಯಷ್ಟು ನೀರಿದ್ದು, ಒಳಹರಿವು 3000 ಕ್ಯೂಸೆಕ್ ಇದೆ.
ಈ ಜಲಾಶಯವನ್ನು 1956 ರಲ್ಲಿ ನಿರ್ಮಿಸಲು ಆರಂಭಿಸಿ 1959ರಲ್ಲಿ ಪೂರ್ಣಗೊಳಿಸಲಾಗಿದೆ. ಕೃಷಿ ಉದ್ದೇಶಕ್ಕೆ ನಿರ್ಮಾಣವಾಗಿರುವ ಈ ಜಲಾಶಯ ರೈತರಿಗೆ ವರದಾನವಾಗಿದೆ. ಅದರಲ್ಲೂ ಕಳೆದ ವರ್ಷದಿಂದ ಭರ್ತಿಯಾಗದೆ ಇದ್ದ ಜಲಾಶಯ ಇದೀಗ ಭತಿಘಯಾಗಿರುವುದು ರೈತರ ಮುಖದಲ್ಲಿ ಸಂತಸ ತಂದಿದೆ.
ಇನ್ನು ಮತ್ತೊಂದು ತಾರಕ ಜಲಾಶಯದಲ್ಲಿಯೂ 2013ರ ಬಳಿಕ ಇದೇ ಮೊದಲ ಬಾರಿಗೆ ಭರ್ತಿಯಾಗುವ ಲಕ್ಷಣ ಗೋಚರಿಸಿದೆ. 1984ರಲ್ಲಿ ಕೃಷಿ ಉದ್ದೇಶದಿಂದ ನಿರ್ಮಾಣವಾದ ತಾರಕ ಜಲಾಶಯ ರೈತರ ಕೃಷಿ ಭೂಮಿಗೆ ನೀರೊದಗಿಸುತ್ತಿದೆ. 2425 ಅಡಿ ಸಾಮಥ್ರ್ಯದ ಈ ಜಲಾಶಯದಲ್ಲಿ 2013ರಲ್ಲಿ ದಾಖಲೆಯ ಪ್ರಮಾಣದ ನೀರು ಸಂಗ್ರಹವಾಗಿದ್ದನ್ನು ಬಿಟ್ಟರೆ ಈ ಬಾರಿಯೇ ನೀರು ಸಂಗ್ರಹವಾಗುತ್ತಿದೆ. 3.80 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯದ ಜಲಾಶಯದ ಕ್ರಸ್ಟ್ ಗೇಟ್ 2006ರಲ್ಲಿ ಒಡೆದು ಜಲಾಶಯದ ನೀರು ಮನೆ, ಜಮೀನಿಗೆ ನುಗ್ಗಿ ಭಾರೀ ಹಾನಿಯನ್ನುಂಟು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಆಗ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರೇ ಕಾರ್ಯ ನಿರ್ವಹಿಸುತ್ತಿದ್ದರು. ಸಂತ್ರಸ್ತರಾದ ರೈತರು ಸೇರಿದಂತೆ ಜನರಿಗೆ ಸುಮಾರು 50 ಲಕ್ಷ ರೂ ಪರಿಹಾರ ನೀಡಲಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





