ಬೆಳಗಾವಿ,: ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಯ ಯಾವುದಾದರೂ ಗುರುತಿನ ಪತ್ರ ನೀಡಿದರೆ ಅವರಿಗೆ ತಕ್ಷಣವೇ ಪಾಸ್ ನೀಡುವ ವ್ಯವಸ್ಥೆಯನ್ನು ಜಾರಿ ಮಾಡಿದ್ದೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
ಜೆಡಿಎಸ್ನ ಎಚ್.ಕೆ.ಕುಮಾರಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿದ್ಯಾರ್ಥಿಗಳಿಗಾಗಿ ಬಸ್ಪಾಸ್ ವಿತರಿಸಲು ಸೇವಾಸಿಂಧು ಪೋರ್ಟಲ್(ಆನ್ಲೈನ್) ಮೂಲಕ ಅರ್ಜಿ ಸಲ್ಲಿಸಿ ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳ ಯಾವುದಾದರೊಂದು ಗುರುತಿನ ಚೀಟಿ ನೀಡಿದರೂ ಪಾಸ್ ಲಭ್ಯವಾಗಲಿದೆ ಎಂದರು.
ಬಿಎಂಟಿಸಿಯಲ್ಲಿ ವಿದ್ಯಾರ್ಥಿಗಳು ಶಾಲಾಕಾಲೇಜಿಗೆ ಪಾವತಿಸಿರುವ ಶುಲ್ಕ, ರಸೀದಿ, ಗುರುತಿನ ಚೀಟಿಯೊಂದಿಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. 14.11.2021ರಿಂದ ಪಾಸ್ ವಿತರಣೆ ಮಾಡುವ ವ್ಯವಸ್ಥೆ ಸುಗಮವಾಗಿ ನಡೆಯುತ್ತಿದೆ ಎಂದು ಹೇಳಿದರು.
ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಶಾಲಾಕಾಲೇಜುಗಳ ಪ್ರವೇಶಾತಿ ಹಾಗೂ ವಾಸ ಸ್ಥಳದ ದಾಖಲೆಯನ್ನು ತೋರ್ಪಡಿಸಿದರೆ ಕನಿಷ್ಟ 60 ಕಿ.ಮೀವರೆಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. 2021-22ನೇ ಸಾಲಿನ ಹೊಸ ವಿದ್ಯಾರ್ಥಿ ಬಸ್ಪಾಸ್ಗಳನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ 26.8-2020ರಿಂದ ಪಾಸ್ ವಿತರಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಗಮದಲ್ಲಿ 24,8.2021ರಿಂದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆಯನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಬಸ್ಪಾಸ್ ಪಡೆಯಬಹುದು. ನಿಯಮಗಳನ್ವಯ ವಾಸಸ್ಥಳದಿಂದ ಶಾಲಾಕಾಲೇಜಿಗೆ 60 ಕಿ.ಮೀ ಸಂಚರಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

