ಮಂಗಳೂರು: ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ ಬರುವ 4 ತಾಲೂಕಿನಲ್ಲಿ ತಕ್ಷಣದಿಂದ ಡಿಸೆಂಬರ್ 17ರ ಮಧ್ಯರಾತ್ರಿವರೆಗೆ 144 ಸೆಕ್ಷನ್ ನಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮಂಗಳವಾರ ರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ಪಿಎಫ್ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ನಡೆದಿತ್ತು. ಇದರ ಬೆನ್ನಲ್ಲೇ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಅವರು ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನಾದ್ಯಂದ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಪುತ್ತೂರು ಉಪವಿಭಾಗದಲ್ಲಿ ಕೋಮುಗಲಭೆ ತಡೆಯುವ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಪ್ರತಿಭಟನೆ ನಡೆಸದಂತೆ ಸೆಕ್ಷನ್ 144 ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.

ನಮಗೂ ಸಂಬಂಧವಿಲ್ಲ: ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ಪಿಎಫ್ ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದಾರೆ.
ರಾತ್ರಿ ವೇಳೆ ಬೀದಿ ದೀಪಗಳನ್ನು ಆರಿಸಿ ನಮ್ಮ ಕಾರ್ಯಕರ್ತರ ಮೇಲೆ ಲಾಠಿ ಬೀಸಿದ್ದಾರೆ. ಕ್ಯಾಮೆರಾಗಳಲ್ಲಿ ಲಾಠಿ ಬೀಸಿದ ದೃಶ್ಯಗಳು ಸೆರೆಯಾಗಬಾರದು ಎಂದು ಹೀಗೆ ಮಾಡಿದ್ದಾರೆ. ಬಂಟ್ವಾಳ ಎಸ್ಐ ಪ್ರಸನ್ನರಿಗೆ ಚೂರಿ ಇರಿತ ಆಗಿದೆ ಅಂತ ಸುದ್ದಿ ಹಬ್ಬಿಸಿದ್ದಾರೆ. ಚೂರಿ ಇರಿತ ಆಗಿದ್ದರೆ ಅವರಿಗೆ ಎಲ್ಲಿ ಗಾಯವಾಗಿದೆ ಅಂತ ತೋರಿಸಲಿ. ಯಾವ ಪೊಲೀಸ್ ಅಧಿಕಾರಿಗೂ ಗಾಯ ಆಗಿಲ್ಲ. ಆದರೆ ಕಥೆ ಕಟ್ಟುತ್ತಿದ್ದಾರೆ ಎಂದು ದೂರಿದರು.
ಪೊಲೀಸ್ ಠಾಣೆಯ ಸುತ್ತ ಸಿಸಿ ಕ್ಯಾಮೆರಾ ಇದೆ. ಅದರ ವಿಡಿಯೋ ಬಹಿರಂಗಪಡಿಸಬೇಕು. ಪ್ರತಿಭಟನೆ ಮಾಡುತ್ತಿದ್ದವರು ಉದ್ವಿಗ್ನತೆ ಸೃಷ್ಟಿಸಿದ್ದರೆ ಅದರ ಸಿಸಿ ಟಿವಿ ಬಹಿರಂಗ ಪಡಿಸಲಿ. ಈ ವಿಚಾರದಲ್ಲಿ ತಪ್ಪಿತಸ್ಥ ಅಧಿಕಾರಿಗಳ ಮತ್ತು ಸಿಬ್ಬಂದಿಯ ತಲೆ ತಂಡವಾಗಬೇಕು. ನಮ್ಮ ಒಬ್ಬ ಧರ್ಮ ಗುರುವಿನ ತಲೆಗೆ ಹೊಡೆದಿದ್ದಾರೆ. ಇದು ಲಾಠಿಯಲ್ಲಿ ಹೊಡೆದಿಲ್ಲ. ಇದು ಬೇರೆ ಆಯುಧದಿಂದ ಹೊಡೆದಿರುವುದು. ಹೀಗಾಗಿ ನಾವು ಸರ್ವ ಜನರನ್ನು ಸೇರಿಸಿ ಡಿಸೆಂಬರ್ 17ರ ಶುಕ್ರವಾರ ಎಸ್ಪಿ ಕಚೇರಿ ಚಲೋ ನಡೆಸುತ್ತೇವೆ. ಎಲ್ಲರೂ ಒಟ್ಟಾಗಿ ಶುಕ್ರವಾರ ಬೃಹತ್ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

