ಧಾರವಾಡ : ಇಂದು ಶ್ರೀರಾಮ ಸೇನೆ ಕಾರ್ಯಕರ್ತರ ಪಿತ್ತ ನೆತ್ತಿಗೇರಿತ್ತು. ಎಚ್ಚರಿಕೆ ಕೊಟ್ಟರು, ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳನ್ನು ಶ್ರೀರಾಮಸೇನೆ ಕಾರ್ಯಕರ್ತರು ಪುಡಿ ಪುಡಿ ಮಾಡಿದ ಘಟನೆ ನಡೆಯಿತು. ಪೊಲೀಸರೆದುರೆ ಇದೆಲ್ಲವೂ ನಡೆದು ಹೋಯ್ತು.
ಇಂದು ಧಾರವಾಡದ ಐತಿಹಾಸಿಕ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿಂದು ಶ್ರೀರಾಮಸೇನೆ ಕಾರ್ಯಕರ್ತರು ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳನ್ನು ಕಿತ್ತೆಸೆದರು. ಎರಡು ವಾರಗಳ ಹಿಂದೆ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಅರ್ಪಿಸಿದ್ದ ಶ್ರೀರಾಮಸೇನೆ ಕಾರ್ಯಕರ್ತರು, ಮುಸ್ಲಿಮರಿಗೆ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬಾರದೆಂದು ಆಗ್ರಹಿಸಿದ್ದರು. ಇದ್ಯಾವದಕ್ಕೂ ತಲೆಕೆಡಿಸಿಕೊಳ್ಳದ ದೇವಸ್ಥಾನದ ಆಡಳಿತ ಮಂಡಳಿ ಯಾವದೇ ತೀರ್ಮಾನ ತೆಗೆದುಕೊಂಡಿರಲಿಲ್ಲ. ಇದರಿಂದಾಗಿ ಆಕ್ರೋಶಗೊಂಡ ಶ್ರೀರಾಮಸೇನೆ ಕಾರ್ಯಕರ್ತರು ದೇವಸ್ಥಾನದ ಆವರಣದಲ್ಲಿ ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ನಬಿಸಾಬ ಎಂಬುವವರ ಅಂಗಡಿ ಪುಡಿ ಪುಡಿ ಮಾಡಿದರು. ಕಲ್ಲಂಗಡಿ ಹಣ್ಣುಗಳನ್ನು ಕಿತ್ತೆಸೆದ ಘಟನೆ ನಡೆಯಿತು. ಇದೆಲ್ಲವೂ ಪೊಲೀಸರೆದುರೆ ನಡೆದು ಹೋಯ್ತು.
ನುಗ್ಗಿಕೇರಿ ಆಂಜನೇಯ ದೇವಸ್ಥಾನ ಇತಿಹಾಸ ಪ್ರಸಿದ್ಧ ದೇವಸ್ಥಾನವಾಗಿದ್ದು, ಪ್ರತಿ ಶನಿವಾರ, ಸಾವಿರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಕಳೆದ 15 ವರ್ಷಗಳಿಂದ ನಾನಾ ತರದ ವ್ಯಾಪಾರ ಮಾಡುವ ನಬಿಸಾಬ ಅಲ್ಲಿರುವ ಇನ್ನುಳಿದ ವ್ಯಾಪಾರಿಗಳ ಜೊತೆ ಉತ್ತಮ ಸ್ನೇಹ ಹೊಂದಿದ್ದಾನೆ. ಇಂದು ಶನಿವಾರ ಆದ ಕಾರಣ ಹೊರಗಡೆ ಏನಾಗಿದೆ ಅಂತಾ ಗೊತ್ತಿಲ್ಲ. ಹೊಟ್ಟೆಪಾಡಿಗಾಗಿ ಎಲ್ಲರೂ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡುತ್ತಾರೆ. ನಾವು ಇವತ್ತಿನವರೆಗೂ ಯಾವ ವ್ಯಾಪಾರಿಗಳ ಕುಲಗೋತ್ರ ಕೇಳಿಲ್ಲ ಎಂದು ದೇವಸ್ಥಾನದ ಅರ್ಚಕ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





