ತಂಗಿಗೆ ಮೆಸೇಜ್ ಮಾಡಬೇಡ ಎಂದು ಬುದ್ಧಿಹೇಳಲು ಹೋಗಿದ್ದ ಅಣ್ಣನೇ ಕೊಲೆಯಾದ ದುರ್ಘಟನೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ನಡೆದಿದೆ. ದೇವರಾಜ್ ( 23) ಮೃತ ಯುವಕನಾಗಿದ್ದು, ಬಸವರಾಜ್ ಹಾಗೂ ಹನುಮಂತನ ವಿರುದ್ಧ
ದೂರು ದಾಖಲಾಗಿದೆ. ಆರೋಪಿಗಳು ಮೃತ ದೇವರಾಜ್ ಸಹೋದರಿಗೆ ಪ್ರೀತಿ ಮಾಡುವಂತೆ ಕಿರುಕುಳ ಕೊಡ್ತಿದ್ದ ಆರೋಪ ಕೇಳಿ ಬಂದಿತ್ತು. ಆಕೆಗೆ ಮೆಸೆಜ್ ಮಾಡೋದು, ಸಿಕ್ಕಸಿಕ್ಕಲ್ಲಿ ಮಾತನಾಡಿಸೋದನ್ನ ಬಸವರಾಜ್ ಮಾಡುತ್ತಿದ್ದ ಎನ್ನಲಾಗಿದೆ .ಈ ಬಗ್ಗೆ ದೇವರಾಜ್ ಬೈದು ಬುದ್ಧಿ ಹೇಳಿದ್ದ. ಬಳಿಕ ಇದೇ ಕೋಪಕ್ಕೆ ಬಸವರಾಜ್ ತನ್ನ ಸ್ನೇಹಿತ ಲಿಂಗಣ್ಣನಿಂದ ಮೆಸೆಜ್ ಮಾಡಿಸಿದ್ದ ಎಂಬ ಆರೋಪ ಕೇಳಿ ಬಂದಿತ್ತು. ದೇವರಾಜ್ ಹಾಗೂ ಆರೋಪಿ ಬಸವರಾಜ್ ಕಡೆಯವರ ಮಧ್ಯೆ ಗಲಾಟೆಯಾಗಿದೆ. ಆಗ ದೇವರಾಜ್ ಗೆ ಚಾಕುವಿನಿಂದ ಬಸವರಾಜ ಇರಿದು ಹೋಗಿದ್ದಾನೆ.
ಗಲಾಟೆಯಲ್ಲಿ ದೇವರಾಜ್ ಮೃತ ಪಟ್ಟಿದ್ದು ಈ ಘಟನೆಯಲ್ಲಿ ಆರೋಪಿಗಳಾದ ಬಸವರಾಜ್ ಹಾಗೂ ಹನುಮಂತಗೂ ಗಾಯಗಳಾಗಿವೆ. ಲಿಂಗಸೂಗೂರು ಆಸ್ಪತ್ರೆಗೆ ಗಾಯಾಳುಗಳು ದಾಖಲಾಗಿದ್ದಾರೆ. ಇತ್ತ ಜಾತಿ ನಿಂದನೆ ಆರೋಪದಡಿ ಮೃತ ದೇವರಾಜ್ ಹಾಗೂ ಮೌನೇಶ್ ವಿರುದ್ಧ ಪ್ರತಿ ದೂರು ದಾಖಲಾಗಿದೆ. ಒಟ್ಟಾರೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಕೇಸ್, ಕೌಂಟರ್ ಕೇಸ್ ದಾಖಲಾಗಿವೆ.