ಢಾಕಾ: ಬಾಂಗ್ಲಾದೇಶದಲ್ಲಿ ಮೀಸಲಾತಿ ಸಂಬಂಧ ಹೊತ್ತಿದ ಕಿಡಿ ಆಂದೋಲನವಾಗಿ ಬದಲಾದ ಪರಿಣಾಮ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನವಾದರು. ಮಧ್ಯಂತರ ಸರ್ಕಾರ ರಚನೆ ಬಳಿಕವೂ ಬಾಂಗ್ಲಾದೇಶದಲ್ಲಿ ಹಿಂಸಾಚಾರಗಳು ನಿಲ್ಲುತ್ತಿಲ್ಲ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ದೌರ್ಜನ್ಯ ಎಸಗಲಾಗ್ತಿದೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ.
ಇದೀಗ ಸುಮಾರು 49 ಹಿಂದೂ ಶಿಕ್ಷಕರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ವರದಿಯಾಗಿದೆ. ಇಷ್ಟೆಲ್ಲಾ ಆದರೆ ಮಾನವ ಹಕ್ಕುಗಳ ಪರ ಹೋರಾಟಗಾರರು ಮತ್ತು ಜಾತ್ಯಾತೀತವಾದಿಗಳು ತುಟಿ ಬಿಚ್ಚದೇ ಮೌನಕ್ಕೆ ಶರಣಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಬಾಂಗ್ಲಾದೇಶದಿಂದ ಹೊರ ಬರುತ್ತಿರುವ ವಿಡಿಯೋಗಳು ಮತ್ತು ಸುದ್ದಿಗಳು ಇನ್ನು ಅಲ್ಲಿನ ರಾಜಕೀಯ ಅಸ್ಥಿರತೆ, ಕಾನೂನು ಉಲ್ಲಂಘಿಸಿ ಗಲಾಟೆಗಳು ನಡೆಯುತ್ತಿವೆ ಎಂಬುದನ್ನು ಬಹಿರಂಗಪಡಿಸುತ್ತಿವೆ. ಇದೀಗ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕ/ಕಿಯಾಗಿ ಸೇವೆ ಸಲ್ಲಿಸುತ್ತಿರುವ ಹಿಂದೂಗಳಿಂದ ರಾಜೀನಾಮೆ ಪಡೆಯಲಾಗುತ್ತಿದೆ ಎಂಬ ಸುದ್ದಿಗಳು ಬಾಂಗ್ಲಾದೇಶದಿಂದ ಬರುತ್ತಿವೆ.
ಡೇಲಿ ಸ್ಟಾರ್ ವರದಿ ಪ್ರಕಾರ, ಆಗಸ್ಟ್ 5ರಂದು ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಇಡೀ ದೇಶದ ತುಂಬೆಲ್ಲಾ ಪ್ರತಿಭಟನೆಗಳು ನಡೆದಿದ್ದವು. ಈ ಸನ್ನಿವೇಶದಲ್ಲಿ ಸುಮಾರು 49 ಹಿಂದೂ ಸಮುದಾಯದ ಶಿಕ್ಷಕರು ರಾಜೀನಾಮೆ ನೀಡಬೇಕಾಯ್ತು. ಪ್ರೊಫೆಸರ್ ಶುಕ್ಲಾ ರಾಣಿ ಹಲ್ದರ್ ಮುಸ್ಲಿಮೇತರ ಅಧ್ಯಾಪಕಿಯಾಗಿದ್ದು, ಬಾರ್ಸಿಲ್ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲಿಷ್ ಬೋಧನೆ ಮಾಡುತ್ತಿದ್ದರು. ಪ್ರತಿಭಟನೆ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ರಾಜೀನಾಮೆ ನೀಡಿದ್ದರು. ಸದ್ಯ 19 ಶಿಕ್ಷಕರು ಮತ್ತೆ ಸೇವೆಗೆ ಮರಳಿದ್ದಾರೆ ಎಂದು ಹೇಳಲಾಗುತ್ತಿದೆ.
ಬಾಂಗ್ಲಾದೇಶದಲ್ಲಿ ಶಿಕ್ಷಕರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗುತ್ತಿದೆ. ಪತ್ರಕರ್ತರು, ಸಚಿವರು ಮತ್ತು ಮಾಜಿ ಸರ್ಕಾರಿ ಅಧಿಕಾರಿಗಳನ್ನು ಜೈಲಿನೊಳಗೆ ಹಾಕಿ ಕಿರುಕುಳ ನೀಡಲಾಗುತ್ತಿದೆ. ಅಹಮದಿಯಾ ಮುಸ್ಲಿಮರ ಕೈಗಾರಿಕೆಗಳನ್ನು ಸುಟ್ಟುಹಾಕಿದ್ದಾರೆ. ಮಧ್ಯಂತರ ಸರ್ಕಾರದ ಸಲಹೆಗಾರರಾಗಿರುವ ನೊಬೆಲ್ ಪುರಸ್ಕೃತ ಯೂನಸ್ ಈ ಕುರಿತು ಏನೂ ಮಾತನಾಡುತ್ತಿಲ್ಲ ಎಂದು ಲೇಖಕಿ ತಸ್ಲೀಮಾ ನಸ್ರಿನ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

