ಶ್ರೀರಂಗಪಟ್ಟಣ: ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಸ್ಥಾಪಿಸುವಂತೆ ಆಚೀವರ್ಸ್ ಅಕಾಡೆಮಿ, ರೋಟರಿ ಕ್ಲಬ್ನಿಂದ ಪಟ್ಟಣದಲ್ಲಿ ಶುಕ್ರವಾರ ಜಾಗೃತಿ ಮೂಡಿಸಲಾಯಿತು.
ಎರಡೂ ಸಂಘಟನೆಗಳ ಮುಖ್ಯಸ್ಥರು ಹಾಗೂ ಸದಸ್ಯರು ಮಣ್ಣಿನ ಗಣೇಶ ಮೂರ್ತಿಯನ್ನು ಹಿಡಿದು ಪಟ್ಟಣದ ಮುಖ್ಯ ಬೀದಿ ಸೇರಿದಂತೆ ವಿವಿಧೆಡೆ ಜಾಗೃತಿ ಜಾಥಾ ನಡೆಸಿದರು. ಹತ್ತಾರು ಮನೆ ಗಳು ಹಾಗೂ ಸಂಘ, ಸಂಸ್ಥೆಗಳಿಗೆ ಮಣ್ಣಿನ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ಉಚಿತವಾಗಿ ವಿತರಿಸಿದರು. ರೋಟರಿ ಸಂಸ್ಥೆ ಅಧ್ಯಕ್ಷ ಮಂಜುರಾಮ್ ಮಾತನಾಡಿ, ರಾಸಾಯನಿಕ ಬಳಸಿ ಸಿದ್ಧಪಡಿಸಿದ ಗಣೇಶ ಮೂರ್ತಿಗಳು ಪರಿಸರಕ್ಕೆ ಮಾರಕ. ಮಾಲಿನ್ಯಕಾರಕ ರಾಸಾಯನಿಕ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಿದರೆ ಜಲಚರಗಳಿಗೆ ತೊಂದರೆಯಾಗುತ್ತದೆ. ಜಾನುವಾರುಗಳಿಗೂ ಸಮಸ್ಯೆ ಉಂಟಾಗುತ್ತದೆ. ಅಪಾಯಕಾರಿ ಬಣ್ಣ ಮತ್ತು ನೀರಿನಲ್ಲಿ ಕರಗರದ ಪಿಒಪಿ ಬಳಸಿ ತಯಾರಿಸುವ ಮೂರ್ತಿಗಳನ್ನು ಯಾರೂ ಪ್ರತಿಷ್ಠಾಪನೆ ಮಾಡಬಾರದು ಎಂದು ಮನವಿ ಮಾಡಿದರು.
ಆಚೀವರ್ಸ್ ಅಕಾಡೆಮಿ ಮುಖ್ಯಸ್ಥ ಆರ್. ರಾಘವೇಂದ್ರ ಮಾತನಾಡಿ, ಗಣೇಶೋತ್ಸವದ ಹೆಸರಿನಲ್ಲಿ ಪರಿಸರವನ್ನು ಹಾಳು ಮಾಡುವ ಕೆಲಸ ಆಗಬಾರದು. ಶಬ್ದ ಮಾಲಿನ್ಯದ ಧ್ವನಿವರ್ಧಕ ಬಳಸಬಾರದು ಎಂದರು. ರೋಟರಿ ಶ್ರೀರಂಗಪಟ್ಟಣದ ನಿರ್ದೇಶಕರಾದ ರವಿ, ಕೃಷ್ಣ, ಆಚೀವರ್ಸ್ ಅಕಾಡೆಮಿ ನಿರ್ದೇಶಕರಾದ ದೇವರಾಜು, ಗುರುಪ್ರಸಾದ್ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

