ನವಲಗುಂದ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವಲ್ಲಿ ಸಿಎಂ ಸಿದ್ದರಾಮಯ್ಯ ಉದಾಸೀನ ಮನೋಭಾವ ತೋರುತಿದ್ದಾರೆ. ಇದೇ ರೀತಿ ನಿರ್ಲಕ್ಷ್ಯ ಧೋರಣೆ ಮುಂದುವರೆದಲ್ಲಿ ಡಿ.12ರಂದು 5 ಸಾವಿರ ಟ್ರಾಕ್ಟರಗಳ ಮೂಲಕ ವಿಧಾನಸೌಧ ಚಲೋ ಕಾರ್ಯಕ್ರಮ ನಡೆಸಲಾಗುವುದೆಂದು ಲಿಂಗಾಯತ ಪಂಚಮಸಾಲಿ ಸಮಾಜದ ಕೂಡಲ ಸಂಗಮ ಪೀಠದ ಬಸವಜಯಮೃಂತ್ಯುಂಜಯ ಸ್ವಾಮಿಜಿ ಎಚ್ಚರಿಸಿದರು.
ಪಟ್ಟಣದ ವೀರಶೈವ ಲಿಂಗಾಯತ ಸಭಾಭವನದಲ್ಲಿ ತಾಲುಕಾ ಪಂಚಮಸಾಲಿ ಸಮಾಜ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪದಗ್ರಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ 2ಎ ಮೀಸಲಾತಿ ಕುರಿತು ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಬೊಮ್ಮಾಯಿಯವರು ಸಮಾಜದ ಬೇಡಿಕೆಗೆ ಸ್ಪಂದಿಸುವ ಮೂಲಕ ಸಕಾರಾತ್ಮಕ ಧೋರಣೆ ತಾಳಿದ್ದರು. ಆದರೆ ಈಗಿನ ಕಾಂಗ್ರೆಸ್ ಸರಕಾರದಲ್ಲಿ ಸಮಾಜದ 20 ಶಾಸಕರಾದ ಸಿಎಂ ಅವರು 2ಎ ಮೀಸಲಾತಿ ಕುರಿತಾಗಿ ಸ್ಪಷ್ಟ ನಿಲುವು ತಾಳಲು ಹಿಂದೇಟು ಹಾಕುತ್ತಿರುವುದು ಸಮಾಜಕ್ಕೆ ಹಿನ್ನಡೆಯಾಗಿದೆ ಇದಕ್ಕೆ ಪೂರ್ವಭಾವಿಯಾಗಿ ಸಮಾಜದ ವಿದ್ಯಾರ್ಥಿಗಳಿಂದ ಪತ್ರ ಚಳುವಳಿ ಆರಂಭಿಸಲಾಗಿದ್ದು, ಸೆ.22ರಂದು ಬೆಳಗಾವಿಯಲ್ಲಿ ರಾಜ್ಯ ಮಟ್ಟದ ನ್ಯಾಯವಾದಿಗಳ ಸಮಾವೇಶ ನಡೆಸಲಾಗುತ್ತಿದ್ದು ಮುಂದಿನ ಹಂತದ ಹೋರಾಟವಾಗಿ ಬೆಂಗಳೂರು ಚಳುವಳಿ ನಡೆಸಲಾಗುವುದು ಎಂದರು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕರಾದ ಡಾ.ಆರ್.ಬಿ.ಶಿರಿಯಣ್ಣವರ, ಮೋಹನ ಲಿಂಬಿಕಾಯಿ, ವಿಜಯ ಕುಲಕರ್ಣಿ, ಬಾಪುಗೌಡ ಪಾಟೀಲ, ಜಿಲ್ಲಾ ಅಧ್ಯಕ್ಷ ನಿಂಗಣ್ಣ ಕರಿಕಟ್ಟಿ ಮಾತನಾಡಿ, ಸಮಾಜದಲ್ಲಿ ಅತೀ ಹೆಚ್ಚು ಬಡವರಿದ್ದು ಸಮಾಜದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ 2ಎ ಮೀಸಲು ದೊರೆತಲ್ಲಿ ಶೈಕ್ಷಣಿಕವಾಗಿ ಬೆಳವಣೆಗೆ ಹೊಂದಲು ಸಾಧ್ಯವಿದ್ದು 2ಎ ಮೀಸಲಾತಿ ದೊರಕುವವರೆಗೂ ಹೋರಾಟ ನಿಲ್ಲದು ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

