ನವದೆಹಲಿ: ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಮಾಲ್ಡೀವ್ಸ್ ಕರೆನ್ಸಿ ವಿನಿಮಯ ಒಪ್ಪಂದಕ್ಕೆ ಇಂದು ಸಹಿ ಹಾಕಿದವು.
ಈ ಒಪ್ಪಂದದಿಂದಾಗಿ ದ್ವೀಪಸಮೂಹ ರಾಷ್ಟ್ರ ಮಾಲ್ಡೀವ್ಸ್ ಗೆ ವಿದೇಶಿ ವಿನಿಮಯ ಮೀಸಲು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಸಾಧ್ಯವಾಗಲಿದೆ.
ಸುಮಾರು 400 ಮಿಲಿಯನ್ ಡಾಲರ್ (3,000 ಕೋಟಿ ರೂ) ಗಾತ್ರದ ಒಪ್ಪಂದ ಇದಾಗಿದ್ದು, 12 ತಿಂಗಳಿನಿಂದ ಹದಗೆಟ್ಟಿದ್ದ ಭಾರತ- ಮಾಲ್ಡೀವ್ಸ್ ದ್ವಿಪಕ್ಷೀಯ ಸಂಬಂಧ ಮುಂದಿನ ದಿನಗಳಲ್ಲಿ ಉತ್ತಮಗೊಳ್ಳುವ ನಿರೀಕ್ಷೆ ಇದೆ. ಕಳೆದ ವರ್ಷ ಮಾಲ್ಡೀವ್ಸ್ ನ 3 ಸಚಿವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿದ್ದ ಪರಿಣಾಮ ಭಾರತ ಮಾಲ್ಡೀವ್ಸ್ ನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿತ್ತು. ಮಾಲ್ಡೀವ್ಸ್ ನ ಅಧ್ಯಕ್ಷ ಮೊಹಮ್ಮದ್ ಮುಯಿಝು ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾರೆ ಈ ವೇಳೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಮುಯಿಝು ಭಾನುವಾರ ಸಂಜೆ ದೆಹಲಿಗೆ ಆಗಮಿಸಿದ್ದು ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಉಭಯ ನಾಯಕರು ಭೇಟಿಯಾದ ನಂತರ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಮೋದಿ ತಮ್ಮ ಹೇಳಿಕೆಯಲ್ಲಿ ಮಾಲ್ಡೀವ್ಸ್ ನ್ನು ಆಪ್ತ ಸ್ನೇಹಿತ ಎಂದು ಹೇಳಿದ್ದು ನೆರೆಹೊರೆಯ ದೇಶಗಳು ಮೊದಲು ಎಂಬ ವಿದೇಶಾಂಗ ನೀತಿಯನ್ನು ಒತ್ತಿಹೇಳಿದರು. ಭಾರತ ಕೋವಿಡ್ ಲಸಿಕೆಗಳನ್ನು ಪೂರೈಸುವುದು ಸೇರಿದಂತೆ, ದ್ವೀಪ ರಾಷ್ಟ್ರದ ಮೇಲೆ ಪರಿಣಾಮ ಬೀರುವ ತುರ್ತು ಪರಿಸ್ಥಿತಿಗಳಿಗೆ ಮೊದಲ ಪ್ರತಿಕ್ರಿಯೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ. 400 ಮಿಲಿಯನ್ ಡಾಲರ್ ದ್ವಿಪಕ್ಷೀಯ ಕರೆನ್ಸಿ ವಿನಿಮಯಕ್ಕೆ ಹೆಚ್ಚುವರಿಯಾಗಿ ₹ 30 ಶತಕೋಟಿ ನೆರವು ನೀಡುವ ಭಾರತದ ನಿರ್ಧಾರಕ್ಕೆ ನಾನು ಕೃತಜ್ಞನಾಗಿದ್ದೇನೆ. ಇದು ವಿದೇಶೀ ವಿನಿಮಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖವಾಗಿದೆ ಎಂದು ಮುಯಿಝು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

