ಬೆಂಗಳೂರು: ಕಳೆದ ಆರು ದಿನಗಳಿಂದ ರಾಜ್ಯದಾದ್ಯಂತ ಗ್ರಾಮ ಪಂಚಾಯತಿಗಳ ನೌಕಕರು ಹೂಡಿದ್ದ ಮುಷ್ಕರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ತೆಗೆದುಕೊಂಡ ನಿರ್ಧಾರಗಳಿಂದ ಸುಖಾಂತ್ಯವಾಗಿದೆ. ಹೀಗಾಗಿ ನಾಳೆಯಿಂದ ಎಂದಿನಂತೆ ಕಚೇರಿ ಕಾರ್ಯಗಳಲ್ಲಿ ನಿರತರಾಗುವುದಾಗಿ ನೌಕರ ಸಂಘದ ಪ್ರತಿನಿಧಿಗಳು ಘೋಷಿಸಿದರು.
ನೌಕರರ ಮಹಾ ಒಕ್ಕೂಟ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳ ಸುಮಾರು 300ಕ್ಕೂ ಹೆಚ್ಚು ಪ್ರತಿನಿಧಿಗಳು ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ತಮ್ಮ ಬೇಡಿಕೆಗಳನ್ನು ಸಚಿವರ ಮುಂದಿರಿಸಿದರು, ಸುಮಾರು 75ಕ್ಕೂ ಹೆಚ್ಚು ಬೇಡಿಕೆಗಳನ್ನು ಮೂರು ಗಂಟೆಗಳ ಕಾಲ ಆಲಿಸಿದ ಸಚಿವರು ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗಬುದಾದ ಎಲ್ಲ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಆದ್ಯತೆಯ ಮೇಲೆ ಈಡೇರಿಸುವುದಾಗಿ ತಿಳಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಬಡ್ತಿ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ನೌಕರರ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸುವುದಾಗಿ ಪ್ರಕಟಿಸಿದ ಸಚಿವರು ಮೂರು ತಿಂಗಳ ಕಾಲಮಿತಿಯೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.
ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ತಮ್ಮ ಹಿತಾಸಕ್ತಿಗಳಿಗಾಗಿ ಹೋರಾಟ ಮಾಡುವುದು ಎಷ್ಟು ಮುಖ್ಯವೋ, ಸಾರ್ವಜನಿಕ ಸೇವೆಯ ಮೂಲಕ ಗ್ರಾಮೀಣ ಜನರ ಹಿತಾಸಕ್ತಿಗಳನ್ನು ಕಾಪಾಡಲು ಅಷ್ಟೇ ಬದ್ಧತೆಯನ್ನು ಹೊಂದಿರಬೇಕಾಗುತ್ತದೆ ಎಂಬ ಕಿವಿಮಾತನ್ನೂ ಸಚಿವರು ಈ ಸಂದರ್ಭದಲ್ಲಿ ಹೇಳಿದರು.
ತಾವು ಸಚಿವರಾಗಿ ಇಲಾಖೆಯ ನೌಕರರ ಹಿತ ಕಾಪಾಡಲು ಸಿದ್ಧರಾಗಿರುವುದಾಗಿ ಹೇಳಿದ ಪ್ರಿಯಾಂಕ್ ಖರ್ಗೆ ಅವರು ಮುಷ್ಕರ ಹೂಡುವದಕ್ಕಿಂತಲೂ ಹೆಚ್ಚಾಗಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಯಾವುದೇ ಸಮಯದಲ್ಲಾಗಲಿ ನೇರವಾಗಿ ಬಂದು ತಮ್ಮನ್ನು ಕಾಣುವಂತೆ ನೌಕರ ವೃಂದಕ್ಕೆ ತಿಳಿಸಿದರು.
ಬೇಡಿಕೆಗಳನ್ನು ಸಮಾಧಾನವಾಗಿ ಆಲಿಸಿ, ಪರಿಹಾರಗಳನ್ನು ಸೂಚಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರ್ಧಾರಕ್ಕೆ ನೌಕರ ವೃಂದದವರು ಶ್ಲಾಘನೆ ವ್ಯಕ್ತಪಡಿಸಿದರು, ಸಚಿವರೂ ನೌಕರರನ್ನು ಅಭಿನಂದಿಸಿ ಸಾಮಾನ್ಯ ಜನರ ಸಬಲೀಕರಣ ಹಾಗೂ ಕಾನೂನುಗಳ ಸರಳಿಕರಣಕ್ಕಾಗಿ ಒಟ್ಟಾಗಿ ಕಾರ್ಯನಿರ್ವಹಿಸೋಣ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

