ಹುಬ್ಬಳ್ಳಿ: ಕಳೆದ ಹತ್ತು ದಿನಗಳ ಹಿಂದೆ ಆನಂದ ನಗರದಲ್ಲಿ ಕಳ್ಳತನದ ಆರೋಪದಲ್ಲಿ ಜೈಲು ಪಾಲಾಗಿದ್ದ ಮೆಕ್ಯಾನಿಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಪೊಲೀಸರ ಕಿರುಕುಳದಿಂದಲೇ ಪತಿ ಸಾವನಪ್ಪಿದ್ದಾರೆ ಎಂದು ಮೃತ ಮೆಕ್ಯಾನಿಕ್ ಮಹಾಂತೇಶನ ಹೆಂಡತಿ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಸದ್ಯ ಈ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆ ಮಾಡಿಕೊಂಡ ಮಹಾಂತೇಶ್ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದ ಎನ್ನಲಾಗಿದೆ. ಈಗ ಈ ಡೆತ್ ನೋಟ್ ವೈರಲ್ ಆಗಿದೆ. ಇದರಲ್ಲಿ ಹಲವು ಪೊಲೀಸರ ಹೆಸರುಗಳನ್ನು ಮಹಾಂತೇಶ್ ಬರೆದಿದ್ದಾನೆ ಎನ್ನಲಾಗುತ್ತಿದೆ. ಬೈಕ್ ಕಳ್ಳತನದ ಆರೋಪದ ಮೇಲೆ ಮಹಾಂತೇಶ್ನನ್ನು ಪೊಲೀಸರು ವಿಚಾರಣೆ ಮಾಡಿದಾಗ ಕಳ್ಳತನವಾದ 12 ಬೈಕ್ ಹಾಗೂ 1 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದು ಈತನನ್ನು ಜೈಲಿಗೆ ಅಟ್ಟಿದ್ದರು.
ಇದಾದ ಸ್ವಲ್ಪ ದಿನಗಳ ನಂತರ ಅಂದ್ರೆ ನವೆಂಬರ್ 21ರಂದು ಮನೆಯಲ್ಲಿ ಮಹಾಂತೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆತನನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ನವೆಂಬರ್ 23 ರಂದು ಚಿಕಿತ್ಸೆ ಫಲಕಾರಿಯಾಗದೆ ಮಹಾಂತೇಶ್ ಮೃತಪಟ್ಟಿದ್ದ. ಹೀಗಾಗಿ ಆತನ ಕುಟುಂಬದವರು ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದರು. ಆದ್ರೆ ಆತ ಸಾವನಪ್ಪಿ 10 ದಿನಗಳ ನಂತರ ಈ ಡೆತ್ ನೋಟ್ ಸಿಕ್ಕಿದೆ. ಇದೀಗ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.
ಉಪನಗರ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿ 12 ಬೈಕ್ ಹಾಗೂ ಕೆಲವು ಬೈಕ್ನ ಬಿಡಿ ಭಾಗಗಳನ್ನು ವಶಕ್ಕೆ ಪಡೆದಿದ್ದರು. ನಂತರ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮೊದಲು ಕಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದಾಗ ಪೊಲೀಸರು ಹಲ್ಲೆ ಮಾಡಿದ ಗುರುತುಗಳು ಕಂಡು ಬಂದಿಲ್ಲ. ಜೊತೆಗೆ ನ್ಯಾಯಾಧೀಶರು ಪೊಲೀಸರು ಹಲ್ಲೆ ಮಾಡಿದ್ದಾರಾ ಎಂದು ಕೇಳಿದಾಗ ಮಹಾಂತೇಶ್ ಆಗಿಲ್ಲ ಎಂದು ಹೇಳಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





