Breaking News

ದೇಶದ ಬಡ ಜನರಿಗೆ ಎರಡು ಕೋಟಿ ಮನೆ ನೀಡಲು ಮನೆಮನೆ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರ ನಿರ್ಧಾರ

ನವದೆಹಲಿ: ಸೂರಿಲ್ಲದ ಜನರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಹೊಸ ವರ್ಷದ ಉಡುಗೊರೆ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ದೇಶದ ಬಡವರಿಗೆ ಇನ್ನೂ ಎರಡು ಕೋಟಿ ಮನೆಗಳನ್ನು ನೀಡಲು ಮನೆಮನೆ ಸಮೀಕ್ಷೆ ನಡೆಸಲು ನಿರ್ಧರಿಸಿದೆ.
ಮುಂದಿನ ಮೂರು ತಿಂಗಳೊಳಗೆ ಅಂದರೆ 2025ರ ಮಾರ್ಚ್ 31ರೊಳಗೆ ಮನೆಮನೆ ಸಮೀಕ್ಷೆ ಪೂರ್ಣಗೊಳಿಸಲಿದೆ.
ಇದು 2024ರಲ್ಲಿ ಬಿಜೆಪಿಯ ಚುನಾವಣಾ ಭರವಸೆಗಳಲ್ಲಿ ಪ್ರಮುಖವಾಗಿತ್ತು.
ಈ ಬಗ್ಗೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಕಳುಹಿಸಿರುವ ಸಂವಹನಾ ಪತ್ರವು ಲಭ್ಯವಾಗಿದ್ದು, ಅರ್ಹ ಕುಟುಂಬಗಳನ್ನು ಗುರುತಿಸಲು ಆವಾಸ್ + 2024 ಅಪ್ಲಿಕೇಶನ್ ಅನ್ನು ಬಳಸಿಕೊಂಡು ಸಮೀಕ್ಷೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.
ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆದ್ಯತೆಯ ಮೇರೆಗೆ ಮನೆ ಸಮೀಕ್ಷೆಯನ್ನು ಪ್ರಾರಂಭಿಸಲು ಮತ್ತು ಮಾರ್ಚ್ 31, 2025 ರೊಳಗೆ ಇದು ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ಯಾವುದೇ ಅರ್ಹ ಕುಟುಂಬಗಳನ್ನು ಹೊರಗಿಡಬಾರದು ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಕಳುಹಿಸಿರುವ ಪತ್ರದಲ್ಲಿ ನಿರ್ದೇಶಿಸಿದೆ.
ಪ್ರಧಾನ ಮಂತ್ರಿ ಆವಾಸ್ (ನಗರ) ಯೋಜನೆಯಡಿ ಇನ್ನೂ ಒಂದು ಕೋಟಿ ಮನೆಗಳ ಸಮೀಕ್ಷೆಯು ಈಗಾಗಲೇ ಪ್ರಾರಂಭವಾಗಿದೆ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮೂರು ಕೋಟಿ ಮನೆಗಳು, ದೇಶದ ಗ್ರಾಮೀಣ ಭಾಗದಲ್ಲಿ ಎರಡು ಕೋಟಿ ಮತ್ತು ನಗರ ಪ್ರದೇಶಗಳಲ್ಲಿ ಒಂದು ಕೋಟಿ ಮನೆಗಳನ್ನು ನಿರ್ಮಿಸುವ ಭರವಸೆ ನೀಡಿತ್ತು.
ಮೊದಲ ಎರಡು ಅವಧಿಯಲ್ಲಿ ಈ ಯೋಜನೆಯಡಿ ಈಗಾಗಲೇ ನಾಲ್ಕು ಕೋಟಿ ಮನೆಗಳನ್ನು ಪೂರ್ಣಗೊಳಿಸಿರುವುದಾಗಿ ಮೋದಿ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿತ್ತು. 2016 ರಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯು ಬಿಜೆಪಿಗೆ ದೊಡ್ಡ ಬದಲಾವಣೆಯಾಗಿದೆ. ಮೂರು ಕೋಟಿ ಹೆಚ್ಚುವರಿ ಮನೆಗಳನ್ನು 2029ರ ಮಾರ್ಚ್ 31ರ ವೇಳೆಗೆ ಪೂರ್ಣಗೊಳಿಸುವ ಗುರಿ ಇದೆ.
ಸರ್ವೇ ಕಾರ್ಯ: ಸಮೀಕ್ಷೆಯನ್ನು ಸರ್ವೇಯರ್ಗಳು ಮತ್ತು ಜನರೂ ಕೂಡ ಮಾಡಲು ಅವಕಾಶವಿದೆ. ಆವಾಸ್ + 2024 ಮೊಬೈಲ್ ಅಪ್ಲಿಕೇಶನ್‍ನಲ್ಲಿ ಮುಖ ದೃಢೀಕರಣವನ್ನು ಬಳಸಿಕೊಂಡು ಸ್ವಯಂ-ಸಮೀಕ್ಷೆಯನ್ನು ಮಾಡಲು ಜನರಿಗೆ ಒಂದು ಆಯ್ಕೆಯನ್ನು ನೀಡಲಾಗುತ್ತದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಸರ್ವೇಯರ್ಗಳನ್ನು ನೋಂದಾಯಿಸಿವೆ. ಆವಾಸ್ + 2024 ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಗ್ರಾಮ ಪಂಚಾಯತ್‍ಗಳಿಗೆ ಮ್ಯಾಪ್ ಮಾಡಲಾಗಿದೆ. ಹೆಚ್ಚುವರಿಯಾಗಿ, ಎಲ್ಲಾ ಅರ್ಹ ಫಲಾನುಭವಿಗಳ ಸಮಗ್ರವಾಗಿ ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳಲು, ಅಪ್ಲಿಕೇಶನ್ ಮುಖಾಧಾರಿತ ದೃಢೀಕರಣವನ್ನು ಬಳಸಿಕೊಂಡು ಸ್ವಯಂ ಸಮೀಕ್ಷೆಯನ್ನು ಮಾಡಲು ನಾಗರಿಕರಿಗೆ ಅನುವು ಮಾಡಿಕೊಡುತ್ತದೆ ಎಂದು ರಾಜ್ಯಗಳಿಗೆ ರವಾನಿಸಿರುವ ಕೇಂದ್ರದ ಪತ್ರದಲ್ಲಿ ತಿಳಿಸಲಾಗಿದೆ.
ಆವಾಸ್ + ಮೊಬೈಲ್ ಅಪ್ಲಿಕೇಶನ್‍ಅನ್ನು ಪ್ರಧಾನಿ ಮೋದಿ ಅವರು ಕಳೆದ ಸೆಪ್ಟೆಂಬರ್ 17 ರಂದು ಭುವನೇಶ್ವರದಲ್ಲಿ ಪ್ರಾರಂಭಿಸಿದರು. ಈ ಅಪ್ಲಿಕೇಶನ್ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮಾರ್ಗಸೂಚಿಗಳ ಆಧಾರದ ಮೇಲೆ ಯೋಜನೆಯ ಅಡಿಯಲ್ಲಿ ಪ್ರಯೋಜನಗಳಿಗೆ ಅರ್ಹರಾಗಿರುವ ಹೆಚ್ಚುವರಿ ಗ್ರಾಮೀಣ ಕುಟುಂಬಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ.
ಇದು ಮನೆಯ ಸಮೀಕ್ಷೆಗಾಗಿ ಮುಖದ ದೃಢೀಕರಣ ತಂತ್ರಜ್ಞಾನ ಆಧಾರಿತ ಅಪ್ಲಿಕೇಶನ್ ಮೂಲಕ ಅರ್ಹ ಫಲಾನುಭವಿಗಳನ್ನು ಗುರುತಿಸುವ ಗುರಿಯನ್ನು ಹೊಂದಿರುವ ಅತ್ಯಾಧುನಿಕ ಉಪಕ್ರಮವಾಗಿದೆ. ಸ್ವಯಂ ಸಮೀಕ್ಷೆಯ ಉದ್ದೇಶಕ್ಕಾಗಿ ನಾಗರಿಕರು ಆಧಾರ್ ಆಧಾರಿತ ಈ ಕೆವೈಸಿ ಅನ್ನು ನಿರ್ವಹಿಸಬೇಕಾಗುತ್ತದೆ.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *