ಕಲಬುರಗಿ: ಈಗಾಗಲೇ ಘೋಷಣೆಯಾಗಿರುವ ಕಲಬುರಗಿ ರೈಲ್ವೆ ವಿಭಾಗ ಕಚೇರಿಗೆ ಮುಂಬರುವ ಬಜೆಟ್ನಲ್ಲಿ ಅನುಮೋದನೆ ನೀಡುವಂತೆ ಆಗ್ರಹಿಸಿ ಜನವರಿ 24ರ ಬೆಳಿಗ್ಗೆ 10.30ಕ್ಕೆ ರೈಲ್ ರೋಕೊ ಪ್ರತಿಭಟನೆ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಕೆಕೆಸಿಸಿಐ) ಅಧ್ಯಕ್ಷ ಶಶಿಕಾಂತ ಬಿ.ಪಾಟೀಲ ತಿಳಿಸಿದರು.
ಕಲ್ಯಾಣ ಕರ್ನಾಟಕಕ್ಕೆ ಅನುಮೋದನೆಗೊಂಡ ಯೋಜನೆಗಳು ಬೇರೆ ಕಡೆ ಸ್ಥಳಾಂತರಗೊಳ್ಳುತ್ತಿವೆ. 1984ರಲ್ಲಿ ಸರೀನ್ ಸಮಿತಿಯು ಕಲಬುರಗಿ ರೈಲ್ವೆ ವಿಭಾಗ ಕಚೇರಿಗೆ ಶಿಫಾರಸು ಮಾಡಿತ್ತು. ಮೂರು ದಶಕಗಳ ಬಳಿಕ ಅಂದರೆ, 2013-14ರಲ್ಲಿ ವಿಭಾಗೀಯ ಕಚೇರಿ ಘೋಷಣೆಯಾಗಿ ₹5 ಕೋಟಿ ಮೀಸಲಿಡಲಾಗಿತ್ತು. ಆ ಬಳಿಕ 43 ಎಕರೆ ಭೂಮಿಯನ್ನೂ ಸ್ವಾಧೀನ ಮಾಡಿಕೊಳ್ಳಲಾಯಿತು. ಇದುವರೆಗೂ ಕಚೇರಿ ಸ್ಥಾಪನೆ ಆಗಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
2016ರಲ್ಲಿ ರೈಲ್ವೆ ಸಚಿವಾಲಯ ಮತ್ತು ರೈಲ್ವೆ ಮಂಡಳಿಯು ಕಲಬುರಗಿ ಮತ್ತು ಜಮ್ಮು ರೈಲ್ವೆ ವಿಭಾಗಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. 2019ರಲ್ಲಿ ರೈಲ್ವೆ ಮಂಡಳಿಯು 1,070 ಕಿ.ಮೀ. ಮಾರ್ಗದ ವೆಚ್ಚದೊಂದಿಗೆ ಕಲಬುರಗಿ ವಿಭಾಗದ ವ್ಯಾಪ್ತಿಯನ್ನು ಅನುಮೋದಿಸಿತ್ತು. ಈಗ ಜಮ್ಮು ರೈಲ್ವೆ ವಿಭಾಗಕ್ಕೆ ಅನುಮೋದನೆ ಸಿಕ್ಕರೂ ಕಲಬುರಗಿಗೆ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಕೆಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಕೆಸಿಸಿಐ ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ಆಹಾರ ಧಾನ್ಯ ಮತ್ತು ಬೀಜಗಳ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಂತೋಷ ಲಂಗರ್, ದಾಲ್ಮಿಲ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ ಕೋಬಾಳ, ಉಪಾಧ್ಯಕ್ಷ ಶರಣಬಸಪ್ಪ, ಎಣ್ಣೆ ಮಿಲ್ಲರ್ಸ್ ಅಸೋಯೇಷನ್ ಅಧ್ಯಕ್ಷ ಬಸವರಾಜ, ಕಪಡಾ ಬಜಾರ್ ಅಸೋಸಿಯೇಷನ್ ಅಧ್ಯಕ್ಷ ಆನಂದ ದಂಡೋತಿ, ಕಾರ್ಯದರ್ಶಿ ಪ್ರೇಮ್ ಬಜಾಜ್, ಕಾಸಿಯಾ ಸದಸ್ಯ ಚನ್ನಬಸಯ್ಯ ಸ್ವಾಮಿ ನಂದಿಕೂರ, ಅಕ್ಕಿ ವ್ಯಾಪಾರ ಸಂಘದ ಅಧ್ಯಕ್ಷ ರವೀಂದ್ರ ಮಾಧಂ ಶೆಟ್ಟಿ, ಲೇಖಕ ಶ್ರೀನಿವಾಸ ಸಿರನೂರಕರ್, ನಿವೃತ್ತ ಎಂಜಿನಿಯರ್ ವೆಂಕಟೇಶ ಮುದಗಲ್, ಹೋಟೆಲ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹ ಮೆಂಡನ್ ಸೇರಿ ಹಲವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

