ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ ಬೆಲೆ ಏರಿಕೆ ಆಗಿದ್ದರ ಮಧ್ಯೆ ಈರುಳ್ಳಿ ಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿ ಸಿಕ್ಕಿದೆ, ಈರುಳ್ಳಿ ಕೆ.ಜಿ. ಚಿಲ್ಲರೆ ಬೆಲೆ 55 ರಿಂದ 65 ರೂಪಾಯಿವರೆಗೆ ಇದೆ. ಫ್ರೆಶೋದಲ್ಲಿ ಕೆ.ಜಿ. ಈರುಳ್ಳಿಗೆ 79 ರೂಪಾಯಿ ಇದೆ.
ಇದೆಲ್ಲ ಗಮನಿಸಿರುವ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಇಂದಿನಿಂದ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ. ಬೆಂಗಳೂರಿನಿಂದ ಇಂದಿನಿಂದ ಮೊಬೈಲ್ ವ್ಯಾನ್ ಮೂಲಕ ಕೇಂದ್ರ ಸರ್ಕಾರ ರಿಯಾಯಿತಿ ದರಕ್ಕೆ ಈರುಳ್ಳಿ ಮಾರಾಟ ಮಾಡಲಿದೆ ಎಂದರೆ ನೀವು ನಂಬಲೇಬೇಕು. ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಅಡಿಯಲ್ಲಿ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಕಾರ್ಯ ನಿರ್ವಹಿಸುತ್ತಿದೆ. ಇದರ ಒಂದು ಶಾಖೆ ಬೆಂಗಳೂರಿನಲ್ಲಿದೆ. ಈ ಶಾಖೆಯು ಕೇಂದ್ರ ಸರ್ಕಾರದ ನಿರ್ದೇಶನದ ಅನುಸಾರ ರಿಯಾಯಿತಿ ದರದಲ್ಲಿ ಬೆಲೆ ಸ್ಥಿರೀಕರಣ ನಿಧಿ (ಪಿಎಸ್ಎಫ್) ಅಡಿಯಲ್ಲಿ ಈರುಳ್ಳಿ ಮಾರಾಟವನ್ನು ಬೆಂಗಳೂರಿನಲ್ಲಿ ಇಂದಿನಿಂದ ಆರಂಭಿಸಿದೆ.
ಗ್ರಾಹಕರಿಗೆ ಅನುಕೂಲ ಆಗುವಂತೆ 35 ರೂಪಾಯಿಗೆ ಒಂದು ಕಿಲೋ ಈರುಳ್ಳಿಯನ್ನು ಈ ಮೊಬೈಲ್ ವ್ಯಾನ್ಗಳಲ್ಲಿ ಮಾರಾಟ ಮಾಡಲಾಗುವುದು. ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆಯ ವರದಿಗಳ ಹಿನ್ನಲೆಯಲ್ಲಿ, ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಈರುಳ್ಳಿ ಸಿಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರ ಈ ರೀತಿಯ ಕ್ರಮಕ್ಕೆ ಮುಂದಾಗಿದೆ.
ಮೊಬೈಲ್ ವ್ಯಾನ್ ಮೂಲಕ ಈರುಳ್ಳಿ ಮಾರಾಟ ಇಂದು ಮಧ್ಯಾಹ್ನ 12.30ಕ್ಕೆ ನಗರ ನಂದಿನಿ ಬಡಾವಣೆ, ಎಚ್ಡಿಎಫ್ಸಿ ಬ್ಯಾಂಕ್ ಲಿಮಿಟೆಡ್, ನಂ.27, 1 ಮುಖ್ಯ ರಸ್ತೆ, ಬೆಂಗಳೂರು, ಇಲ್ಲಿ ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಗ್ರಾಹಕರು ಕಡಿಮೆ ಬೆಲೆಯ ಗುಣಮಟ್ಟದ ಈರುಳ್ಳಿಯನ್ನು ಖರೀದಿಸಿ ಈ ಉಪಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

